ಸಿರುಗುಪ್ಪ : ನಗರದ ಸಿ.ಡಿ.ಪಿ.ಓ ಕಛೇರಿಯ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದುಕೊರತೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ಜರುಗಿತು.
ಲೋಕಾಯುಕ್ತ ವೃತ್ತ ನಿರೀಕ್ಷಕ ಸುರೇಶ್ ಬಾವಿಮನೆ ಅವರಿಗೆ ಸಾರ್ವಜನಿಕರಿಂದ ಕಂದಾಯ, ನಗರಸಭೆ, ಗ್ರಾಮ ಪಂಚಾಯಿತಿ, ನೀರಾವರಿ ಇಲಾಖೆ ಸೇರಿದಂತೆ ಒಟ್ಟು 09 ಅರ್ಜಿಗಳು ಸಲ್ಲಿಕೆಯಾದವು.
ಶೇಕ್ಷಾವಲಿ ತಂದೆ ಎರಿಸ್ವಾಮಿ ಅವರು ನಗರದ ಸರ್ವೆ ನಂಬರ್ 406 ಎ/2ನಲ್ಲಿ ಒತ್ತುವರಿಯಾದ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಜಮೀನನ್ನು ತೆರವುಗೊಳಿಸುವಂತೆ ಸಲ್ಲಿಸಿದ್ದು, ವಿಳಂಬವಾಗುತ್ತಿರುವ ಬಗ್ಗೆ ದೂರಿದರು.
ಹಾಜಿಸಾಬ್ ಅವರು ನಗರಸಭೆಯಲ್ಲಿ ಕರ್ತವ್ಯ ನಿರತ ಕರವಸೂಲಿಗಾರರ ಬದಲಾಗಿ ಖಾಸಗಿ ವ್ಯಕ್ತಿಗಳು ರಸೀದಿ ಹಾಕುತ್ತಿದ್ದು, ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದರು.
ನಗರದಲ್ಲಿ ನೂತನವಾಗಿ ನಿರ್ಮಿತವಾಗಿ ಹಲವಾರು ವರ್ಷಗಳೇ ಕಳೆದರೂ ಉದ್ಘಾಟನೆಗೊಳ್ಳದ ತರಕಾರಿ ಮಾರುಕಟ್ಟೆ ಸಂಕೀರ್ಣಗಳು ಅನೈತಿಕ ಚಟುವಟಿಕೆಯ ತಾಣವಾಗಿದ್ದು, ಕೂಡಲೇ ಸಂಬಂದಿಸಿದ ಅಧಿಕಾರಿಗಳು ಅವುಗಳ ಸದುಪಯೋಗಕ್ಕೆ ಮುಂದಾಗಬೇಕೆಂದು ಕರ್ನಾಟಕ ರಕ್ಷಣಾ ಪಡೆಯಿಂದ ಅಹವಾಲು ಸಲ್ಲಿಸಲಾಯಿತು.
ತಮ್ಮ ತಂದೆ ಹೆಸರಿಗಿರುವ ಜಾಗವನ್ನು ಸಹೋದರರಿಗೆ ಹಂಚುವಂತೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ನಮ್ಮನ್ನು ಅಲೆದಾಡಿಸುತ್ತಿದ್ದಾರೆಂದು ಹಚ್ಚೊಳ್ಳಿಯ ನಾಗರಾಜ ತಳವಾರ್ ಯಾದವ್ ಅವರು ಪಿಡಿಓ ಅಧಿಕಾರಿ ಮೇಲೆ ದೂರಿದರು.
ನಗರದಿಂದ ಬಂಡ್ರಾಳ್ ಕ್ರಾಸ್ವರೆಗಿನ ಆದೋನಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಸಾಮಾಜಿಕ ಕಾರ್ಯಕರ್ತ ನರಸಪ್ಪ ಅಹವಾಲು ಸಲ್ಲಿಸಿದರು.
ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಲೋಕಾಯುಕ್ತ ವೃತ್ತ ನಿರೀಕ್ಷಕ ಸುರೇಶ್ ಬಾವಿಮನೆ ಅವರು ಸಾರ್ವಜನಿಕರು ತಮ್ಮ ಕಛೇರಿಗಳಿಗೆ ಬಂದಾಗ ಸಂಯಮದಿಂದ ವರ್ತಿಸಿ, ಅವರನ್ನು ಹೆಚ್ಚಾಗಿ ಅಲೆಯದಂತೆ ತಮ್ಮ ಮಟ್ಟದಲ್ಲೇ ಇತ್ಯರ್ಥಗೊಳಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಇದೇ ವೇಳೆ ತಹಶೀಲ್ದಾರ್ ಕೆ.ನರಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್ಕುಮಾರ್.ಎಸ್.ದಂಡಪ್ಪನವರ್, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




