ಬೆಂಗಳೂರು: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಶಸಕಾಂಗ ಪಕ್ಷದ ಸಭೆ ನಡೆಸಲಾಗಿದ್ದು,ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಪ್ರಮುಖವಾಗಿ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರದ ಸಾಧನೆಯನ್ನು ಸಮರ್ಥವಾಗಿ ಮಂಡಿಸುವಂತೆ ಮತ್ತು ವಿರೋಧ ಪಕ್ಷಗಳ ಆಧಾರ ರಹಿತ ಆರೋಪಗಳು ಹಾಗೂ ಸುಳ್ಳುಗಳನ್ನು ದಾಖಲೆ ಹಾಗೂ ಅಂಕಿ ಅಂಶಗಳ ಸಮೇತ ಸಮರ್ಥವಾಗಿ ಪ್ರಸ್ತಾಪಿಸಿ ಉತ್ತರ ನೀಡುವಂತೆ ವಿವರಿಸಿದ್ದಾರೆ.
ಇದೇ ವೇಳೆ ರಾಜ್ಯ ಸಚಿವ ಸಂಪುಟದಿಂದ ತಮ್ಮ ಆಪ್ತ ಕೆ.ಎನ್ ರಾಜಣ್ಣ ಅವರನ್ನು ವಜಾಗೊಳಿಸಿದ ಬಗ್ಗೆ ಕೂಡ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ ಎಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ರಾಜಣ್ಣರನ್ನು ವಾಜಾ ಮಾಡಿರುವ ಕ್ರಮ ಸಂಚಲ ಸೃಷ್ಟಿ ಮಾಡಿದ್ದು, ಇದೇ ಕಾರಣಕ್ಕೆ ಶಾಸಕಾಂಗ ಪಕ್ಷದ ಸಭೆಯ ಆರಂಭದಲ್ಲೇ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಅನಿವಾರ್ಯವಾಗಿ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಯ್ತು ಎಂದು ಹೇಳಿದ್ದಾರೆ.
ಇದೇ ವೇಳೆ ರಾಜಣ್ಣ ಅವರನ್ನು ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸಮರ್ಥಿಸಿದ್ದು, ಅವರು ಮಾತನಾಡಿದ ಉದ್ದೇಶ ಬೇರೆಯೇ ಆಗಿದ್ದರೂ ಅವರು ಹೇಳಿದ ರೀತಿ ಸರಿ ಇರಲಿಲ್ಲ.ಈ ಕಾರಣಕ್ಕಾಗಿ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕಾಯಿತು.
ನಮ್ಮ ನಾಯಕ ರಾಹುಲ್ ಗಾಂಧಿ ಅವರ ನಿರ್ದೇಶನದ ಮೇಲೆ ರಾಜಣ್ಣರನ್ನ ಸಂಪುಟದಿಂದ ಕೈಬಿಡಲಾಗಿದೆ ಎಂದು ಪಕ್ಷದ ಶಾಸಕರಿಗೆ ವಿವರಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದ ಬಗ್ಗೆ ರಾಹುಲ್ ಗಾಂಧಿ ಮಾಡಿದ್ದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜಣ್ಣ ವ್ಯಂಗ್ಯಭರಿತ ಹೇಳಿಕೆ ನೀಡಿದ್ದರು.
ನಮ್ಮ ಕಾಲದಲ್ಲೇ ಅಲ್ವಾ ವೋಟರ್ ಲಿಸ್ಟ್ ಆಗಿದ್ದು, ಆಗೇನು ಕಣ್ಣುಮುಚ್ಚಿ ಕುಳಿತಿದ್ರಾ? ಮಾತನಾಡಿದ್ರೆ ಏನೇನೋ ಆಗುತ್ತೆ.ಈಗ ದೂರಿದ್ರೆ ಏನರ್ಥ? ಎಂದು ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದರು.ಇದೇ ಕಾರಣಕ್ಕೆ ಅವರು ರಾಹುಲ್ ಗಾಂಧಿ ಅವಕೃಪೆಗೆ ಒಳಗಾಗಿದ್ದಾರೆ.




