ಬೆಂಗಳೂರು :’ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ದಾರ್ಶನಿಕರ ತತ್ವಗಳನ್ನು, ಆಚಾರ, ವಿಚಾರಗಳನ್ನು ಕಲಿಸಬೇಕು. ಸಂಸ್ಕಾರವಂತ ಮಕ್ಕಳು ಮನೆಗೆ ಮತ್ತು ಸಮಾಜಕ್ಕೆ ದಾರಿದೀಪಗಳಾಗುತ್ತಾರೆ’ ಎಂದು ಆನೇಕಲ್ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವರದ ರಾಘವೇಂದ್ರ ಬಡಾವಣೆಯ ಶ್ರೀ ರಾಘವೇಂದ್ರ ಪವಮಾನ ಮಂದಿರದಲ್ಲಿ ವಿಶ್ವವೀರಶೈವ ಲಿಂಗಾಯಿತ ವೇದಿಕೆ ಸಹಯೋಗದೊಂದಿಗೆ ಶ್ರೀ ವೀರಶೈವ ಲಿಂಗಾಯಿತ ವೇದಿಕೆ ಆಯೋಜಿಸಲಾದ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನೋತ್ಸವ, ವೇದಿಕೆಯ 14ನೇ ವರ್ಷದ ವಾರ್ಷಿಕೋತ್ಸವ, ಬಸವ ಜಯಂತಿ ಮತ್ತು ರೇಣುಕಾಚಾರ್ಯ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ ಸಮಾಜದಲ್ಲಿ ದಿನನಿತ್ಯ ಸಂಭವಿಸುವ ಪ್ರಕ್ಷುಬ್ಧ ಅವಲಕ್ಷಣಗಳಿಗೆ ಕಡಿವಾಣ ಹಾಕಿ, ಸುಸಂಸ್ಕೃತ ಬದುಕನ್ನು ರೂಪಿಸಿಕೊಳ್ಳಲು ಧಾರ್ಮಿಕ ಕಾರ್ಯಕ್ರಮಗಳು ಮಹತ್ವಪೂರ್ಣ ಸಂದೇಶ ಕೊಡುತ್ತವೆ’ ಎಂದರು.
‘ ಕ್ರಾಂತಿಯೋಗಿ ಬಸವಣ್ಣನವರನ್ನು ನಮ್ಮ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಆದರೆ ಬಸವಣ್ಣನವರು ಇಡೀ ವಿಶ್ವಕ್ಕೆ ಅತ್ಯುತ್ತಮ ಸಂದೇಶ ಕೊಟ್ಟ ವಿಶ್ವದ ಸಾಂಸ್ಕೃತಿಕ ನಾಯಕ’ ಎಂದು ಉತ್ತರ ಕರ್ನಾಟಕ ಸಂಘಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಮೇಟಿ ತಿಳಿಸಿದರು.ಚಿಕ್ಕಬಾಣವಾರದ ವೀರ ಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷ ಎಂ.ಹೆಚ್ ಪಾಟೀಲ್ ಸರ್ವರಿಗೂ ಸ್ವಾಗತಿಸಿದರು.
ಸಮಾರಂಭದಲ್ಲಿ ಉಚಿತ ಲಿಂಗ ದೀಕ್ಷೆ, ಕವಿಯತ್ರಿ ಪುಷ್ಪ ಬಸವರಾಜ ಬಣಕಾರ ಅವರ ‘ಎನ್ನೊಳಗಣ ಬಸವಪ್ರಭು’ ಎಂಬ ಕವನ ಸಂಕಲನ ಬಿಡುಗಡೆ, ಕುಮಾರಿ ಭೂಮಿಕಾ ಕೊಣ್ಣೂರ ಅವರಿಂದ ಭರತನಾಟ್ಯ, ಪ್ರತಿಭಾ ಪುರಸ್ಕಾರ, ಭಕ್ತಿ ಗೀತೆಗಳ ಗಾಯನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಇದೆ ವೇಳೆ ಪತ್ರಕರ್ತರಾದ ಅಯ್ಯಣ ಮಾಸ್ಟರ್, ಪ್ರಸನ್ನಕುಮಾರ್, ಮಂಜುನಾಥ್ ಮತ್ತು ಕೆಂಪರಾಜು ಇವರುಗಳಿಗೆ ಗೌರವಿಸಲಾಯಿತು.
ಶಿವಾಜಿನಗರದ ಜಂಗಮ ಮಠದ ಚನ್ನಬಸವನಂದ ಸ್ವಾಮೀಜಿ, ವೇದಿಕೆಯ ಕಾರ್ಯದರ್ಶಿ ಎಂ.ಎಚ್. ಪಾಟೀಲ್, ಸಮಾಜ ಸೇವಕ ಎಂ.ಬಿ. ದಯಾನಂದ್, ಎಂ.ಕೆ. ಜಗದೀಶ್, ಅಕ್ಕಮಹಾದೇವಿ ಅಕ್ಕನ ಬಳಗದ ಗೌರವಾಧ್ಯಕ್ಷ ಆರಾಧ್ಯ,ಲತಾ ಕುಂದರಗಿ, ಅಶೋಕ್ ಎಸ್ ಪಾಟೀಲ್, ಶಿವಗಂಗಾಧರ್, ಹನುಮಂತಪ್ಪ ಮೇಡೆಗಾರ ಮಲ್ಲಿಕಾರ್ಜುನ್, ಬಸವರಾಜ್ ಸೇರಿದಂತೆ ಮುಂತಾದವರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್




