
ಕಾಗವಾಡ: ಮತಕ್ಷೇತ್ರದ ಜುಗೂಳ, ಮಂಗಾವತಿ ಮತ್ತು ಶಹಾಪುರ ಗ್ರಾಮಗಳನ್ನು ಅತೀ ಶೀಘ್ರದಲ್ಲಿಯೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ಶನಿವಾರ ಕಾಗವಾಡ ಮತಕ್ಷೇತ್ರದ ಮಂಗಾವತಿ ಗ್ರಾಮದ ಮಹಾದೇವ ದೇವರ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಭೂಮಿಪೂಜೆ, ಜುಗೂಳ ಗ್ರಾಮದಲ್ಲಿ ಶ್ರೀ ಯಲ್ಲಮ್ಮದೇವಿ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಶಹಾಪೂರ ಗ್ರಾಮದಲ್ಲಿ ಶ್ರೀ ಭರಮಪ್ಪ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಮೊಳವಾಡ ಗ್ರಾಮದಲ್ಲಿ ಶ್ರೀ ಮಾರುತಿ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಕುಸನಾಳ ಗ್ರಾಮದಲ್ಲಿ ಭಗವಾನ 108 ಶಾಂತಿನಾಥ ಜೈನ ಬಸದಿ ಹತ್ತಿರ ಸಮುದಾಯ ಭವನಕ್ಕೆ, ಉಗಾರ-ಬುದ್ರುಕ ಪೀರ ಮಮ್ಮುಲಾಲಬಾಬಾ ದರ್ಗಾ ಜೀರ್ಣೋದ್ಧಾರ ಕಾಮಗಾರಿಗೆ, ಶ್ರೀ ಭರಮಪ್ಪ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ, ಶ್ರೀ ಮರಗುಬಾಯಿ ದೇವರ ಗುಡಿಯ ಹತ್ತಿರ ಸಮುದಾಯ ಭವನಕ್ಕೆ, ಫರೀದಖಾನವಾಡಿ ಶ್ರೀ ಲಕ್ಷ್ಮೀ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ, ಮಂಗಸೂಳಿ ವೀರಶೈವ ಪಂಚಮಸಾಲಿ ಸಮಾಜ ಸೇವಾ ಸಂಘದ ಸಮುದಾಯ ಭವನಕ್ಕೆ, ಶ್ರೀ ಬಿರೋಬಾ ದೇವರ ಪಾಲಕಿ ಗೃಹದ ಹತ್ತಿರ ಸಮುದಾಯ ಭವನಕ್ಕೆ, ಶ್ರೀ ಮಸೋಬಾ ದೇವಸ್ಥಾನದ ಹತ್ತಿರ ಸಮುದಾಯ ಭವನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಈ ಸಂಬಂಧ ಈಗಾಗಲೇ ನಾನು ಸಿ.ಎಮ್.ಸಿದ್ಧರಾಮಯ್ಯ ಹಾಗೂ ಡಿ.ಸಿ.ಎಮ್ ಡಿ.ಕೆ.ಶಿವಕುಮಾರೊಂದಿಗೆ ಚರ್ಚಿಸಿದ್ದು, ಕೆಲವೇ ತಿಂಗಳಲ್ಲಿಯೇ ಸ್ಥಳಾಂತರ ಕಾರ್ಯ ಪ್ರಾರಂಭಿಸುವುದಾಗಿ ಹೇಳಿದ ಅವರು ಮಳೆಗಾಲದ ಅವಧಿಯಲ್ಲಿ ಈ ಮೂರೂ ಗ್ರಾಮಗಳಲ್ಲಿ ಕೃಷ್ಣಾ ನದಿಯ ನೀರು ತಿಂಗಳು ಗಟ್ಟಲೇ ನಿಲ್ಲುತ್ತದೆ ಇದರಿಂದ ಈ ಗ್ರಾಮಗಳ ಗ್ರಾಮಸ್ಥರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆಯುತ್ತಾರೆ ಹೀಗಾಗಿಯೇ ಅತೀ ಶೀಘ್ರದಲ್ಲಿಯೇ ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧರಿಸಲಾಗಿದೆ ಎಂದರು.
ಮಂಗಾವತಿ ಕಾಗವಾಡ ಮಧ್ಯದ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿಯೇ ಪೂರ್ಣಗೊಂಡು ಶಂಕುಸ್ಥಾಪನೆ ನೆರವೇರಿಸುವೆ ಎಂದ ಅವರು ಮತಕ್ಷೇತ್ರದ 60 ಗ್ರಾಮಗಳಲ್ಲಿ 72 ಸಮುದಾಯ ಭವನ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ಕೆಲವೇ ತಿಂಗಳಲ್ಲಿಯೇ ಪೂರ್ಣಗೊಳ್ಳುತ್ತವೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಕಿರಿಯ ಅಭಿಯಂತರ ಮಡಿವಾಳ ಪಾಟೀಲ, ಧುರೀಣರಾದ ಅನೀಲ ಸಿಂಧೆ, ಹರ್ಷ ಮಗದುಮ್, ಸುನೀಲ ತೇಲಿ, ಸುನೀಲ ಪಾಟೀಲ, ಶ್ರೀಮಂತ ಸಲಗರೆ, ಅನೀಲ ಸತ್ತಿ, ಬಾಲಾಜಿ ಪಾಟೀಲ, ಅನೀಲಕುಮಾರ ಪಾಟೀಲ, ಈಶ್ವರ ಕೋಳಿ, ವಸಂತ ಗಾಡಿವಡ್ಡರ, ಅಣ್ಣಾಸಾಹೇಬ ಪಾಟೀಲ, ಕಾಕಾ ಪಾಟೀಲ, ಬಿ.ಐ.ಪಾಟೀಲ, ಸುರೇಶ ಪಾಟೀಲ, ರಾಜಗೌಡ ಪಾಟರ್, ರವೀಂದ್ರ ವ್ಹಾಟೆ, ರಾಜು ಕಡೋಲಿ, ಅನೀಲ ಕಡೋಲಿ, ಉಮೇಶ ಪಾಟೀಲ, ಅವಿನಾಶ ಪಾಟೀಲ, ತಾತ್ಯಾಸಾಹೇಬ ಪಾಟೀಲ, ವಸಂತ ಖೋತ, ರಾಹುಲ ಶಹಾ, ಆದಿತ್ಯ ಬಿಂಗೆ, ರಾಹುಲ ಕಟಗೇರಿ, ಬಾಳು ಕಟಗೇರಿ, ವೀರಭದ್ರ ಕಟಗೇರಿ, ಶಿಲಾಧರ ಕಾಂಬಳೆ, ಸುನೀಲ ಅವಟಿ, ಪ್ರಕಾಶ ಕಾಂಬಳೆ, ಸೇರಿದಂತೆ ಇತರರು ಇದ್ದರು.
ವರದಿ: ಚಂದ್ರಕಾಂತ ಕಾಂಬಳೆ




