ಬೆಳಗಾವಿ: ಇತ್ತ ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ನಡೆದಿದ್ದ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟದಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಅತ್ತ ಬೆಳಗಾವಿ ಜಿಲ್ಲೆಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಪ್ಪು ಮಸಿ ಬಳಿದಿದ್ದ ವಿವಾದ ಆರಂಭವಾಗಿತ್ತು.
ಬೆಳಗಾವಿ ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಕಿಡಿಗೇಡಿಗಳು ಕಪ್ಪು ಮಸಿ ಎರಚಿದ್ದಾರೆ ಎಂದು ಹೇಳಲಾಗಿತ್ತು. ಸ್ಥಳದಲ್ಲಿ ಬಿಗುವ್ನ ವಾತಾವರಣ ನಿರ್ಮಾಣವಾಗಿತ್ತು.
ತಕ್ಷಣ ಎಚ್ಚೆತ್ತ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ಪರಿಸ್ಥಿತಿಯನ್ನು ಶಾಂತಗೊಳಿಸಿತ್ತು.
ಇದೇ ವೇಳೆ ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಬಿದ್ದಿರುವ ಮಸಿ ರೀತಿಯ ದ್ರವ ಹಾಗೂ ರಾಯಣ್ಣ ಮೂರ್ತಿ ಪಕ್ಕದಲ್ಲಿರುವ ಮರದ ಎಲೆ, ಮರದ ಅಂಟು ಪದಾರ್ಥವನ್ನು ಸಂಗ್ರಹಿಸಿ ಎಫ್ ಎಸ್ ಎಲ್ ಗೆ ರವಾನಿಸಲಾಗಿತ್ತು.
ಇದೀಗ ಲ್ಯಾಬ್ ವರದಿ ಬಹಿರಂಗವಾಗಿದೆ. ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಬಿದ್ದಿರುವುದು ಕಪ್ಪು ಮಸಿಯಲ್ಲ, ಅದು ಮರದಿಂದ ಬಿದ್ದಿರುವ ಅಂಟು ದ್ರವ ಎಂದು ತಿಳಿದುಬಂದಿದೆ.
ರಾಯಣ್ಣ ಮೂರ್ತಿ ಮೇಲೆ ಬಿದ್ದಿರುವುದು ಮೂರ್ತಿಯ ಸಮೀಪದಲ್ಲೇ ಇರುವ ಮರದಿಂದ ಬಿದ್ದಿರುವ ಅಂಟಿನ ದ್ರವ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ದೃಢವಾಗಿದೆ.
ಇದು ಯಾವುದೇ ಕಿಡಿಗೇಡಿಗಳು ನಡೆಸಿರುವ ಕೃತ್ಯವಲ್ಲ. ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಮೂಲಕ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.




