ಸಿರುಗುಪ್ಪ : ಭತ್ತದ ಹುಲ್ಲಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟವಾದ ಘಟನೆ ತೆಕ್ಕಲಕೋಟೆ ಪಟ್ಟಣ ವ್ಯಾಪ್ತಿಯ ದೇವಿನಗರ ಕ್ಯಾಂಪಿನಲ್ಲಿ ಡಿ.13 ಶನಿವಾರದಂದು ಜರುಗಿದೆ.
ನಷ್ಟದಲ್ಲಿರುವ ರೈತರಿಗೆ ಸರ್ಕಾರ ನೆರವಾಗಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
ದೇವಿನಗರ ಕ್ಯಾಂಪಿನ ರೈತರಾದ ವೈ.ಸರ್ವಚಲ, ಕೆ.ಸಾಯಿತೇಜ ತಂದೆ ಸುಧಾಕರ ಎಂಬ ರೈತರು ಖಾಲಿ ಜಾಗದಲ್ಲಿ ದನಕರುಗಳಿಗೆ ಸಂಗ್ರಹಿಸಿದ್ದ ಭತ್ತದ ಹುಲ್ಲಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಬಣವೆ ಹೊತ್ತಿ ಉರಿದು ಭಸ್ಮವಾಗಿದ್ದು, ಸುಮಾರು 80 ಸಾವಿರ ರೂಪಾಯಿ ನಷ್ಟವಾಗಿದೆಂದು ಅಂದಾಜಿಸಲಾಗಿದೆ.
ಈ ಬಾರಿ ಎರಡನೇ ಬೆಳೆಗೆ ನೀರಿಲ್ಲದ ಕಾರಣ ಒಂದು ವರ್ಷಕ್ಕೆ ಆಗುವಷ್ಟು ಮೇವು ಸಂಗ್ರಹಣೆ ಮಾಡಲಾಗಿತ್ತು. ಪಕ್ಕದ ಜಮೀನಿನಲ್ಲಿ ಯಾರೋ ಕುರಿ ಅಥವಾ ದನಗಾಹಿಗಳು ಬೀಡಿ ಸಿಗರೇಟ್ ಸೇದುವಾಗ ಆಕಸ್ಮಿಕವಾಗಿ ಹೊತ್ತಿದ ಬೆಂಕಿಯಿಂದ ಬಣವೆಗೆ ತಗುಲಿರಬಹುದೆಂಬ ಸಂಶಯ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಮಜರ್ ಹಸನ್ ಸಿಬ್ಬಂದಿಗಳಾದ ದೊಡ್ಡಲಿಂಗಪ್ಪ, ನಾಗರಾಜ ಲಿಂಗರಾಜ್, ಸಚಿನ್ಕುಮಾರ್, ಮುರುಳಿಧರ ಅವರು ತಮ್ಮ ವಾಹನದ ಜೊತೆಗೆ ಜೆ.ಸಿ.ಬಿ ಯಂತ್ರದ ಸಹಾಯದೊಂದಿಗೆ ಮೂರು ಗಂಟೆಗಳ ಕಾಲ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಆದರೆ ಬಣವೆ ಸುಟ್ಟು ಕರಕಲಾಗಿದ್ದು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿದೆ.
ಭತ್ತದ ಹುಲ್ಲಿನ ಬಣವೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ದನಕರುಗಳಿಗೆ ಮೇವಿಲ್ಲದಂತಾಗಿದ್ದು, ಸರ್ಕಾರದಿಂದ ಏನಾದರೂ ನಷ್ಟ ಪರಿಹಾರವನ್ನು ನೀಡಿದರೆ ಸಹಾಯವಾಗುತ್ತದೆ ಎಂದು ಸ್ಥಳೀಯರಾದ ಗೋಪಾಲರೆಡ್ಡಿ, ಶ್ರೀಧರ್, ಶ್ರೀಹರಿ, ಲಕ್ಷ್ಮಿನಾರಾಯಣರೆಡ್ಡಿ ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




