ಹುಬ್ಬಳ್ಳಿ:– ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಖಂಡಿಸಿ ನಗರದಲ್ಲಿಂದು ವಿಶ್ವ ಹಿಂದೂ ಪರಿಷದ್ ಹುಬ್ಬಳ್ಳಿ ಮಹಾನಗರ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಹತ್ತಿರದ ಇಂಡಿ ಪಂಪ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ ವಿಎಚ್ಪಿ ಕಾರ್ಯಕರ್ತರು ಸರ್ಕಾರ ತಪ್ಪಿತಸ್ಥರನ್ನು ಶಿಕ್ಷಿಸುವುದನ್ನು ಬಿಟ್ಟು ಕರ್ನಾಟಕ ಸರ್ಕಾರ ಕೇಸ್ ವಾಪಸ್ ತೆಗೆದುಕೊಳ್ಳುವುದಾಗಿ ನಿರ್ಧಾರ ಕೈಗೊಂಡಿರುವುದನ್ನು ಖಂಡಿಸಿದರು.
ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ಪ್ರತಿಭಟನೆ ಮಾಡಲಾಗುವುದು. ರಾಜ್ಯ ಸರ್ಕಾರದ ಮುಸ್ಲಿಂ ತುಷ್ಟೀಕರಣದ ವಿರುದ್ಧ ಹೋರಾಡಲು ಸಿದ್ದರಿದ್ದೇವೆ ಎಂದು ಪ್ರತಿಭಟನಾಕಾರರು ಸ್ಥಳಕ್ಕ ಆಗಮಿಸಿದ ತಹಶೀಲ್ದಾರ ಕಲಗೌಡ ಪಾಟೀಲರಿಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವಿಶ್ವ ಹಿಂದೂ ಪರಿಷದ್ ಹುಬ್ಬಳ್ಳಿ ಮಹಾನಗರ ಅಧ್ಯಕ್ಷ ಸಂಜೀವ ಬಡಸ್ಕರ, ಕಾರ್ಯದರ್ಶಿ ರಘು ಯಲ್ಲಕ್ಕನವರ,ವಿಭಾಗ ಕಾರ್ಯದರ್ಶಿ ರಮೇಶ ಕದಮ್, ಪ್ರಮುಖರಾದ ಜಯತೀರ್ಥ ಕಟ್ಟಿ, ವಿಜಯ ಕ್ಷೀರಸಾಗರ, ಅಶೋಕ ಅಣವೇಕರ, ಸುಭಾಸ ಡಂಕ, ವಿವೇಕ ಮೊಕಾಶಿ, ಸುನೀಲ ಕಟ್ಟೀಮನಿ, ದಿನೇಶ ವಾಘ್ಮೋಡೆ, ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ:- ಸುಧೀರ್ ಕುಲಕರ್ಣಿ