ತುರುವೇಕೆರೆ : ರೋಟರಿ ಕ್ಲಬ್ ತುರುವೇಕೆರೆ, ರೋಟರಿ ಬೆಂಗಳೂರು ನಾರ್ತ್ವೆಸ್ಟ್, ಓಯಸಿಸ್ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ನಡೆದ ಸರಳ ಕಾರ್ಯಕ್ರಮದಲ್ಲಿ ಇಬ್ಬರು ವ್ಯಕ್ತಿಗಳು ಒಟ್ಟಾಗಿ ಒಬ್ಬರ ಹಿಂದೆ ಒಬ್ಬರು ಕುಳಿತು, ಸೈಕಲ್ ತುಳಿಯುತ್ತಾ ಸಂಚರಿಸುವಂತಹ ಟ್ಯಾಂಡೆಮ್ ಸೈಕಲ್ ಅನ್ನು ವಿಕಲಚೇತನರಿಗೆ, ಅಂಧವ್ಯಕ್ತಿಗಳಿಗೆ ಅನುಕೂಲವಾಗಲೆಂದು ವಿತರಿಸಲಾಯಿತು.

ರೋಟರಿ ಬೆಂಗಳೂರು ನಾರ್ತ್ ವೆಸ್ಟ್ ಅಧ್ಯಕ್ಷ ಲಕ್ಷ್ಮೀ ಅಚ್ಯುತ ಮಾತನಾಡಿ, ಟ್ಯಾಂಡೆಮ್ ಸೈಕಲ್ ಗಳು ವಿಕಲಚೇತನರಿಗೆ, ದೃಷ್ಟಿ ಕಳೆದುಕೊಂಡವರಿಗೆ ಬಹಳ ಅತ್ಯುತ್ತಮ ಸಂಚಾರಿ ವಾಹನವಾಗಿದೆ. ಈ ವಾಹನದಿಂದ ವಿಕಲಚೇತನರಾಗಲೀ, ಅಂಧತೆ ಇರುವವರಾಗಲೀ ಮತ್ತೊಬ್ಬರ ಸಹಕಾರದೊಂದಿಗೆ ಸುಗಮವಾಗಿ ಎಲ್ಲಿ ಬೇಕಾದರೂ ಸಂಚರಿಸಬಹುದಾಗಿದೆ. ಈ ಸೈಕಲ್ ನಲ್ಲಿ ಎರಡು ಚಕ್ರ, ನಾಲ್ಕು ಪೆಡಲ್ ಗಳಿದ್ದು, ಸೈಕಲ್ ಚಲಾಯಿಸುವವರು ಮಾತ್ರವಲ್ಲ, ಹಿಂಬದಿ ಕುಳಿತವರು ಸೈಕಲ್ ತುಳಿಯುತ್ತಾ ಸಂಚಾರಕ್ಕೆ ನೆರವನ್ನು ನೀಡಬಹುದಾದ ವ್ಯವಸ್ಥೆ ಇದರಲ್ಲಿದೆ. ಇದರಿಂದ ಒಬ್ಬರನ್ನು ಕೂರಿಸಿಕೊಂಡು ಸೈಕಲ್ ತುಳಿಯುವ ಶ್ರಮವನ್ನು ಸಮಪ್ರಮಾಣದಲ್ಲಿ ಚಾಲಕ ಹಾಗೂ ಸವಾರ ಹಂಚಿಕೊಂಡು ಎಲ್ಲೆಡೆ ಪ್ರಯಾಣಿಸಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ತುರುವೇಕೆರೆ ಅಧ್ಯಕ್ಷ ವಿ.ಆರ್.ಉಮೇಶ್, ಕಾರ್ಯದರ್ಶಿ ಸುನಿಲ್, ರೋಟರಿ ಬೆಂಗಳೂರು ನಾರ್ತ್ ವೆಸ್ಟ್ ಕಾರ್ಯದರ್ಶಿ ಸಚಿನ್ ಕಾಂಬ್ಳೆ, ಓಯಸಿಸ್ ಕ್ಲಬ್ ನ ಅಧ್ಯಕ್ಷ ಪಾರ್ಥಸಾರಥಿ, ಕಾರ್ಯದರ್ಶಿ ಸೌರಭ್, ಜಿಲ್ಲಾ ಕಾರ್ಯದರ್ಶಿ ರೇಣುಕೇಶ್ವರಸ್ವಾಮಿ, ವಲಯ ಅಂಬಾಸಿಡರ್ ಮಧುಸೂಧನ್ ಬಿಡಿ, ಸಹಾಯಕ ರಾಜ್ಯಪಾಲ ಆನಂದ್, ವಲಯ ಕಾರ್ಯದರ್ಶಿ ನಾಗೇಶ್, ಜಿಲ್ಲಾ ನಿರ್ದೇಶಕ ದಿಲೀಪ್ ಪಿಳ್ಳೈ, ಮಿಂಕು ಭುತ್ತರ್ ಸೇರಿದಂತೆ ರೋಟರಿ ಪದಾಧಿಕಾರಿಗಳು, ಪಲಾನುಭವಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




