ಬೆಂಗಳೂರು: ಕೆಪಿಸಿಸಿ ಸ್ಥಾನ ಯಾರಿಗೆ ಕೊಡುತ್ತಾರೆ ಎಂಬುದನ್ನು ಎಲ್ಲರೂ ಕಾದು ನೋಡಬೇಕಷ್ಟೇ. ಸಿಎಂ ಸಿದ್ದರಾಮಯ್ಯ ದೆಹಲಿಯಿಂದ ವಾಪಸ್ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ. ನಾನೇನೂ ಹೇಳಲು ಆಗಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕೆಪಿಸಿಸಿ ಅಧ್ಯಕ್ಷನ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಚರ್ಚೆ ಏನು ಅನ್ನೋದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಪಸ್ ಬಂದ ನಂತರವೇ ಗೊತ್ತಾಗಬೇಕು.
ಈ ವಿಷಯವನ್ನು ಪಕ್ಷದ ವರಿಷ್ಠರು ಎಷ್ಟು ಗಂಭೀರವಾಗಿ ಪರಿಣಿಸಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಬದಲಾವಣೆ ಅಗತ್ಯ ಎಂದು ಭಾವಿಸಿದರೆ, ಅದಕ್ಕಾಗಿ ಪ್ರಕ್ರಿಯ ಶುರುವಾಗುತ್ತದೆ ಎಂದು ಅವರು ಹೇಳಿದರು.
ನಾನು ಕೆಪಿಸಿಸಿ ಸ್ಥಾನದ ಆಕಾಂಕ್ಷಿಯಿಂದ ಹಿಂದೆ ಸರಿಯುತ್ತಿದ್ದೇನೆ ಎಂಬ ಪ್ರಶ್ನೆ ಬರಲ್ಲ. ಇದು ಪಕ್ಷದ ವಿಚಾರ. ಅವರಿಗೆ ಅನುಕೂಲ ಆದವರನ್ನು ಆ ಸ್ಥಾನಕ್ಕೆ ನೇಮಿಸುತ್ತಾರೆ. ನಾವು ಮನವಿ ಮಾಡಿದಾಗ ಅವರು ನಮಗೆ ಸ್ಥಾನ ಕೊಡಲ್ಲ. ಅವರದೇ ಲೆಕ್ಕಾಚಾರದಲ್ಲಿ ಮಾಡುತ್ತಾರೆ. ಅದು ಯಾವುದೂ ನಮ್ಮ ಕೈಯಲ್ಲಿ ಇಲ್ಲ. ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ ಬಳಿ ವ್ಯಕ್ತಪಡಿಸಬಹುದಷ್ಟೇ. ಮುಂದಿನದು ನಾವು ಕಾದು ನೋಡಬೇಕಷ್ಟೇ ಎಂದರು.