Ad imageAd image

ನಮ್ಮ ಸಾಧನೆ, ಬದ್ಧತೆ ನೋಡಿ ಮತ ಕೊಡಿ – ಚನ್ನರಾಜ ಹಟ್ಟಿಹೊಳಿ

Bharath Vaibhav
WhatsApp Group Join Now
Telegram Group Join Now

ಬೆನಕನಹಳ್ಳಿಯಲ್ಲಿ ಮುಖಂಡರು, ಕಾರ್ಯಕರ್ತರ ಸಭೆ ; ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ 75 ಸಾವಿರಕ್ಕಿಂತ ಹೆಚ್ಚು ಲೀಡ್ ಕೊಡುವ ಅಭಯ

ಬೆಳಗಾವಿ : ನಾವು ಯಾರನ್ನೋ ನೋಡಿ ಮತ ಕೊಡಿ ಎಂದು ಕೇಳುವುದಿಲ್ಲ. ನಮ್ಮ ಇಲ್ಲಿಯವರೆಗಿನ ಸಾಧನೆ, ಬದ್ಧತೆ ಮತ್ತು ಕಾಂಗ್ರೆಸ್ ಪಕ್ಷದ ಯೋಜನೆ ನೋಡಿ ಮತ ಕೊಡಿ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಗುರುವಾರ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಪರ ಉಚಗಾಂವ ಭಾಗದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ನಾವು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ನೋಡಿ ನೀವೆಲ್ಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಸಹ ಬೆಂಬಲಿಸಿ. ಮೃಣಾಲ ಹೆಬ್ಬಾಳಕರ್ ನಿಮಗೆ ಹೊಸಬನಲ್ಲ. ನಿಮ್ಮ ಕಣ್ಣ ಮುಂದೆಯೇ ಬೆಳೆದ ಹುಡುಗ. ದಿನದ 24 ಗಂಟೆಯೂ ನಿಮ್ಮ ಕೈಗೆ ಸಿಗುವ ಹುಡುಗ. ನಿಮ್ಮೆಲ್ಲರ ಸೇವೆ ಮಾಡುವ, ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಕನಸು ಹೊತ್ತು ಕಣಕ್ಕೆ ಇಳಿದಿದ್ದಾನೆ. ಲಕ್ಷ್ಮೀ ಹೆಬ್ಬಾಳಕರ್ ಕುಟುಂಬದ ಜೊತೆಗೆ ನಿಮಗೆ ಕಳೆದ 10 ವರ್ಷಗಳಿಂದಲೂ ನಿಕಟವಾದ ಸಂಬಂಧವಿದೆ. ಹಾಗಾಗಿ ಒಂದೇ ಕುಟುಂಬದಂತಿರುವ ನಾವೆಲ್ಲ ಸೇರಿ ಮುಂದಿನ ದಿನಗಳಲ್ಲೂ ಕೆಲಸ ಮಾಡೋಣ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.

ಕಾಂಗ್ರೆಸ್ ಪಕ್ಷದ ಇತಿಹಾಸ ದೊಡ್ಡದಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ. ಬ್ರಿಟೀಶರನ್ನು ಭಾರತದಿಂದ ಓಡಿಸಿದ ನಂತರ ಶೂನ್ಯದಿಂದ ರಾಷ್ಟ್ರವನ್ನು ಕಟ್ಟಿದ ಪಕ್ಷ ಕಾಂಗ್ರೆಸ್. ಹಿಂದಿನಿಂದಲೂ ನುಡಿದಂತೆ ನಡೆದಿದೆ. ಅಭಿವೃದ್ಧಿಯಲ್ಲಿ ಬದ್ಧತೆ ತೋರಿಸಿದೆ. ಕಳೆದ ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿಗೊಳಿಸುವ ಮೂಲಕ ಜನರ ಜೀವನದಲ್ಲಿ ನೆಮ್ಮದಿ ಮೂಡಿಸಿದೆ. ಇದರಿಂದಾಗಿ ಪಕ್ಷದ ಮೇಲಿನ ವಿಶ್ವಾಸ ಇನ್ನಷ್ಟು ಹೆಚ್ಚುವಂತಾಗಿದೆ. ಮುಂದಿನ ದಿನಗಳಲ್ಲಿ ಸಹ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೂ ಹಲವಾರು ಯೋಜನೆಗಳು ಬರಲಿವೆ. ನಿಮ್ಮೆಲ್ಲರ ಸಹಕಾರ ಸದಾ ಇರಲಿದೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಮಾತನಾಡಿ, ನನ್ನ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಾವ ಚನ್ನರಾಜ ಹಟ್ಟಿಹೊಳಿ ಅವರೇ ನನಗೆ ರಾಜಕೀಯ ಗುರುಗಳು. ನಾನು ಅವರ ಮಾರ್ಗದರ್ಶನದಲ್ಲೇ ಸಮಾಜ ಸೇವೆ ಮತ್ತು ರಾಜಕೀಯವನ್ನು ಮಾಡುತ್ತಿರುವೆ. ಜನರ ಸೇವೆ ಮಾಡುವುದನ್ನು ಅವರು ನನಗೆ ಕಲಿಸಿಕೊಟ್ಟಿದ್ದಾರೆ. ನೀವೆಲ್ಲ ಕಳೆದ 10 ವರ್ಷದಲ್ಲಿ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಅಪಾರ ಪ್ರೀತಿ, ವಿಶ್ವಾಸ ತೋರಿಸಿದ್ದೀರಿ. ನಾನು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದರೆ ಇಡೀ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುತ್ತೇನೆ. ಕ್ಷೇತ್ರದ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಗಳನ್ನು ತರುತ್ತೇನೆ. ಹೆಚ್ಚು ಹೆಚ್ಚು ಉದ್ಯಮಗಳನ್ನು ಆರಂಭಿಸಲು ಸ್ಥಳೀಯರಿಗೆ ಪ್ರೋತ್ಸಾಹ ಹಾಗೂ ಸಹಾಯ ನೀಡುತ್ತೇನೆ ಎಂದು ತಿಳಿಸಿದರು.


ಬೆಳಗಾವಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಕನಸು ಹೊಂದಿದ್ದೇನೆ. ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲಾಗುವುದು. ಕೃಷಿ, ಶಿಕ್ಷಣ, ಆರೋಗ್ಯ, ಔದ್ಯೋಗಿಕ ಯೋಜನೆಗಳನ್ನು ತರಲಾಗುವುದು. ಮೂರು ರಾಜ್ಯಗಳ ಸಂಗಮದಂತಿರುವ ಬೆಳಗಾವಿಯನ್ನು ಎಲ್ಲ ರೀತಿಯಲ್ಲೂ ಬೆಳೆಸಲು ಅವಕಾಶವಿದೆ. ಆ ದಿಸೆಯಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಮೃಣಾಲ ಹೆಬ್ಬಾಳಕರ್ ಭರವಸೆ ನೀಡಿದರು.

ಸಭೆಯಲ್ಲಿ ಉಚಗಾಂವ ಬ್ಲಾಕ್ ಕಾಂಗ್ರೆಸ್ ನ ಅನೇಕ ಮುಖಂಡರು, ಕಾರ್ಯಕರ್ತರು ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ನಾವು ಮನೆ ಮಗಳು ಎಂದು ಒಪ್ಪಿಕೊಂಡು, ಸಹಕಾರ ನೀಡುತ್ತಿದ್ದೇವೆ. ಅವರಿಂದ ಕ್ಷೇತ್ರಕ್ಕೆ ಸಾಕಷ್ಟು ಕೆಲಸಗಳಾಗಿವೆ. ಅದೇ ರೀತಿಯಲ್ಲಿ ಮೃಣಾಲ ಹೆಬ್ಬಾಳಕರ್ ಅವರನ್ನು ಸಹ ಬೆಳೆಸುವುದು ನಮ್ಮ ಕರ್ತವ್ಯ. ನಾವೆಲ್ಲ ನಿಮ್ಮೊಂದಿಗಿದ್ದೇವೆ. ನಮ್ಮಿಂದ ಸಾಧ್ಯವಾದಷ್ಟು ಕ್ಷೇತ್ರದಲ್ಲೆಲ್ಲ ಅಡ್ಡಾಡಿ ಪ್ರಚಾರ ಮಾಡುತ್ತೇವೆ. ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಗಿಂತ ಹೆಚ್ಚಿನ ಮತ ಬರುವಂತೆ ಮಾಡುತ್ತೇವೆ ಎಂದು ಅಭಯ ನೀಡಿದರು.


ನಮ್ಮ ಸುತ್ತಮುತ್ತ ಇರುವ ಬಹಳಷ್ಟು ಬೇರೆ ಪಕ್ಷಗಳ ಜನರು ಸಹ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಅವರನ್ನೇ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ನಮಗೆ ಸ್ಥಳೀಯ ಅಭ್ಯರ್ಥಿ ಬೇಕು. ನಮ್ಮ ಸಂಸದರನ್ನು ಹುಡುಕಿಕೊಂಡು ಹೋಗುವಂತಹ ಸಂದರ್ಭ ಬರಬಾರದು. ನಮ್ಮ ಜಿಲ್ಲೆಗೆ ಅನ್ಯಾಯ ಮಾಡಿವರಿಗೆ ನಮ್ಮ ಬೆಂಬಲವಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಕ್ಷೇತ್ರದಲ್ಲಿ ಕನಿಷ್ಟ 75 ಸಾವಿರ ಮತಗಳ ಲೀಡ್ ಕೊಡಿಸುತ್ತೇವೆ ಎಂದು ಸಭೆಯಲ್ಲಿ ಮುಖಂಡರು ಹೇಳಿದರು.

ವರದಿ: ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!