Ad imageAd image

ಶಿವಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ‘ಚಪ್ಪಲಿ’ ನಿರ್ಬಂಧ: ಬರಿಗಾಲಿನ ಪಯಣಕ್ಕೆ ವೈದ್ಯರ ಸಾಥ್

Bharath Vaibhav
ಶಿವಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ‘ಚಪ್ಪಲಿ’ ನಿರ್ಬಂಧ: ಬರಿಗಾಲಿನ ಪಯಣಕ್ಕೆ ವೈದ್ಯರ ಸಾಥ್
WhatsApp Group Join Now
Telegram Group Join Now

ಚೇಳೂರು : ತಾಲ್ಲೂಕಿನ ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಪಾದರಕ್ಷೆ ಧರಿಸಲು ನಿರಾಕರಿಸಲಾಗುತ್ತಿದ್ದು, ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಸಿಬ್ಬಂದಿ ಮಾತ್ರವಲ್ಲದೆ, ಅಲ್ಲಿನ ವೈದ್ಯರೇ ಈ ವಿಚಿತ್ರ ನಿಯಮಕ್ಕೆ ಸಮ್ಮತಿ ಸೂಚಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಾರ್ವಜನಿಕರ ಆರೋಪ: ಕಳೆದ ಹಲವು ದಿನಗಳಿಂದ ಶಿವಪುರ ಆಸ್ಪತ್ರೆಗೆ ಬರುವ ಬಡ ರೋಗಿಗಳು ಮತ್ತು ವೃದ್ಧರನ್ನು ಸಿಬ್ಬಂದಿ ಅಡ್ಡಗಟ್ಟುತ್ತಿದ್ದಾರೆ. ಚಪ್ಪಲಿ ಧರಿಸಿ ಆಸ್ಪತ್ರೆಯೊಳಗೆ ಬರಬಾರದು, ಹೊರಗೇ ಬಿಟ್ಟು ಬರಬೇಕು ಎಂದು ಸಾರ್ವಜನಿಕರನ್ನು ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ರೋಗಿಗಳು ಚಪ್ಪಲಿ ಬಿಚ್ಚಲು ನಿರಾಕರಿಸಿದರೆ ಅಥವಾ ತರ್ಕ ಮಾಡಿದರೆ, ಅವರಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಲಾಗುತ್ತಿದೆ ಅಥವಾ ನಿರಾಕರಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ವೈದ್ಯರ ನಡೆಯೂ ನಿಗೂಢ: ಈ ಕುರಿತು ಸಾರ್ವಜನಿಕರು ಆಸ್ಪತ್ರೆಯ ವೈದ್ಯರಾದ ಸುಜಿತ್ ರೆಡ್ಡಿ ಅವರಿಗೆ ದೂರು ನೀಡಿದರೂ ಸಹ, ಅವರು ರೋಗಿಗಳ ಪರ ನಿಲ್ಲುವ ಬದಲು ಸಿಬ್ಬಂದಿಯ ನಿಯಮವನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಮ್ಮ ಸಿಬ್ಬಂದಿ ಬಿಟ್ಟು ಬೇರೆ ಯಾರೂ ಚಪ್ಪಲಿ ಹಾಕುವಂತಿಲ್ಲ, ನೀವೂ ಹಾಗೆಯೇ ಮಾಡಿ ಎಂಬ ಹಾರಿಕೆಯ ಉತ್ತರಗಳನ್ನು ನೀಡಿ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.

ಸೋಂಕಿನ ಆತಂಕ: ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನೆಲದ ಮೇಲೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಹರಡುವಿಕೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳನ್ನು ಬರಿಗಾಲಿನಲ್ಲಿ ನಡೆಸುವುದರಿಂದ ಹೊಸ ಹೊಸ ಸೋಂಕುಗಳು ತಗುಲುವ ಅಪಾಯವಿದೆ. ಸ್ವಚ್ಛತೆಯ ನೆಪ ಹೇಳುವ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಮಾತ್ರ ಶೂ ಹಾಗೂ ಚಪ್ಪಲಿ ಧರಿಸಿ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ತಾರತಮ್ಯದ ಭಾವನೆ ಮೂಡಿಸಿದೆ.

ತಪ್ಪದ ಕಿರಿಕ್: ದೂರದ ಹಳ್ಳಿಗಳಿಂದ ಬರುವ ಬಡ ರೋಗಿಗಳಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಸರ್ಕಾರದ ಯಾವುದೇ ಅಧಿಕೃತ ಆದೇಶವಿಲ್ಲದಿದ್ದರೂ ಶಿವಪುರ ಪಿಹೆಚ್‌ಸಿಯಲ್ಲಿ ಈ ರೀತಿಯ ಅಲಿಖಿತ ನಿಯಮ ಜಾರಿಯಲ್ಲಿರುವುದು ಎಷ್ಟು ಸರಿ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಕ್ರಮಕ್ಕೆ ಆಗ್ರಹ: ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡಲೇ ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೋಗಿಗಳಿಗೆ ತೊಂದರೆ ನೀಡುತ್ತಿರುವ ಸಿಬ್ಬಂದಿ ಹಾಗೂ ಇದಕ್ಕೆ ಸಾಥ್ ನೀಡುತ್ತಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ಗೌರವಯುತ ಚಿಕಿತ್ಸೆ ಸಿಗುವಂತೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ : ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!