ರಸ್ತೆಯ ವಿಚಾರಕ್ಕೆ ಗಲಾಟೆ ಮಾಡಿ ಅಸಭ್ಯವಾಗಿ ವರ್ತಿಸಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷನ ವಿರುದ್ಧ ಮಹಿಳೆಯೊಬ್ಬರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಈ ಬೆಳವಣಿಗೆಯ ನಂತರ ಬಿಜೆಪಿ ಆತನನ್ನು ತಕ್ಷಣ ಪಕ್ಷದಿಂದ ಉಚ್ಚಾಟಿಸಿದೆ.
ಮನೆಗೆ ಹೋಗುವ ರಸ್ತೆಗೆ ಸಂಬಂಧಿಸಿದಂತೆ ಇಡ್ಕಿದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಕೊಡೆಂಚರಪಾಲು ಮತ್ತು ಮಹಿಳೆಯೊಂದಿಗೆ ಜಗಳ ನಡೆದಿದೆ. ರಸ್ತೆಯ ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದಾಗ, ಪದ್ಮನಾಭ ಅವರು ತನ್ನೆದುರು ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ (ಈ ಬಗ್ಗೆ ವಿಡಿಯೋ ವೈರಲ್ ಆಗಿದೆ) ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಮಾಹಿತಿ ಪಡೆದ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಪದ್ಮನಾಭ ಸಪಲ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಕೂಡಲೇ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆಯೂ ಸೂಚಿಸಿದ್ದಾರೆ.




