ಬೆಳಗಾವಿ: ಜಿಲ್ಲೆಯ ವಿಭಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯ ಶ್ರೀನಗರದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್ ಕ್ರಿಕೆಟ್ ಮೈದಾನವನ್ನು ಉದ್ಘಾಟಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕೆಂದು ಈಗಾಗಲೇ ಹಲವು ಬಾರಿ ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ.ಆದರೆ ಈ ಕುರಿತು ಸರ್ಕಾರ, ಸಿಎಂ ಸಿದ್ದರಾಮಯ್ಯನವರೇ ಅಂತಿಮ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ಅನುದಾನ ಕಾಯಬೇಕಿಲ್ಲ, ಆಯಾ ಇಲಾಖೆಗಳಲ್ಲಿ ಲಭ್ಯ ಇರುವ ಅನುದಾನ ಬಳಸಿ ಅಭಿವೃದ್ಧಿ ವೇಗ ಹೆಚ್ಚಿಸಬಹುದು. ಟ್ರಾಫಿಕ್ ಸಮಸ್ಯೆ ಉದ್ಭವಿಸದಂತೆ ಬರುವ ದಿನಗಳಲ್ಲಿ ಅಶೋಕ ವೃತ್ತ, ಚನ್ನಮ್ಮಾ ವೃತ್ತ, ಕೊಲ್ಲಾಪುರ ವೃತ್ತವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದರು.




