ಬಾಗಲಕೋಟೆ : ನನ್ನ ಪ್ರಕಾರ ಶಾಸಕ ಬಸನಗೌಡ ಯತ್ನಾಳ ಅವರು ಕಾಂಗ್ರೆಸ್ ಪರ ಕೆಲಸ ಮಾಡಬೇಕು. ಬಿಜೆಪಿಗೆ ಮಾಡಕೂಡದು. ಅವರು ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಉಚ್ಚಾಟನೆ ಮಾಡಿದ ಪಾರ್ಟಿ ಪರ ಯಾಕೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಗೊತ್ತಿರುವ ಮಟ್ಟಿಗೆ ಶಾಸಕ ಬಸನಗೌಡ ಯತ್ನಾಳ ಬಿಜೆಪಿಗೆ ಮಾಡಲಿಕ್ಕಿಲ್ಲ. ಕಾಂಗ್ರೆಸ್ ಪರ ಪ್ರಚಾರಕ್ಕೆ ಯತ್ನಾಳಗೆ ಮನವಿ ಮಾಡ್ತೀರಾ ಎಂಬ ಪ್ರಶ್ನೆಗೆ ಇಲ್ಲವೆಂದು ಸನ್ನೆ ಮಾಡಿದರು.
ನಾರಾಯಣಸ್ವಾಮಿ ಅವರಿಗೆ ಕನಸು ಬಿದ್ದಿತ್ತಾ?: ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ ಎಂದು ಹೇಳಿರುವ ಚಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಾರವಾಗಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ನಾರಾಯಣಸ್ವಾಮಿ ಅವರಿಗೆ ಕನಸು ಬಿದ್ದಿತ್ತಾ? ಅವರು ನಮ್ಮ ಹೈಕಮಾಂಡ್ ಅಲ್ಲ. ನಾರಾಯಣಸ್ವಾಮಿ ಇರೋದು ಯಾವ ಪಾರ್ಟಿ? ಬಿಜೆಪಿಯಲ್ಲಿರೋ ನಾರಾಯಣಸ್ವಾಮಿ ಹೇಗೆ ಹೇಳ್ತಾರೆ? ಏನೋ ಹೇಳಬೇಕೋ ಹೇಳ್ತಾರೆ. ಅಂತ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ ಎಂದರು.
ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್ನವರು ಕೆಲಸ ಮಾಡುತ್ತಿದ್ದಾರೆ ಎಂದಿರುವ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಬಿಜೆಪಿಯವರೇ ನಮ್ಮ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯ ಮಾಡುತ್ತಿದ್ದಾರೆ. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ ಎಂದರು.




