ಕಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ವ್ಯಾಪ್ತಿಯಲ್ಲಿ ಭೂಸ್ವಾಧೀನಗೊಳ್ಳಲಾದ ಜಮೀನುಗಳಿಗೆ ಒಪ್ಪಂದದ ದರದಂತೆ ಪರಿಹಾರ ವಿತರಣೆ ಪ್ರಕ್ರಿಯೆಗೆ ಬಾಗಲಕೋಟೆಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಲವಾರು ಸಚಿವರು ಪಾಲ್ಗೊಂಡಿದ್ದರು.
ಈ ಯೋಜನೆಯಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್ ನಿಂದ 524.256 ಮೀಟರ್ ಗೆ ಹೆಚ್ಚಿಸಲಾಗುತ್ತದೆ.
ಇದರಿಂದ ಹೆಚ್ಚುವರಿ ಸುಮಾರು 130 ಟಿಎಂಸಿ ನೀರನ್ನು ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುತ್ತದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಭೂಮಿ ನೀಡುವ ರೈತರಿಗೆ ನ್ಯಾಯಯುತ ಪರಿಹಾರ ಕೊಡಬೇಕು ಎಂಬ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿ, ನೀರಾವರಿ ಭೂಮಿ ಪ್ರತಿ ಎಕರೆಗೆ ರೂ. 40 ಲಕ್ಷ ಹಾಗೂ ಒಣಭೂಮಿ ಪ್ರತಿ ಎಕರೆಗೆ ರೂ. 30 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು.
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪರಿಹಾರ ವಿತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಾಗಿ ಭೂಮಿ ನೀಡಿದ ಎಲ್ಲ ರೈತರಿಗೆ ಪರಿಹಾರವನ್ನು ವಿತರಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಹೇಳಿಕೆ: ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, “ಯುಕೆಪಿ -3ನೇ ಹಂತದ ಯೋಜನೆಗೆ 15 ವರ್ಷದ ಹಿಂದೆ ಕೋರ್ಟಿನ ಆದೇಶ ಬಂತು. ಕೇಂದ್ರ ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಲಿಲ್ಲ. ಭೂಸಂತ್ರಸ್ತ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಭಾಗದವರು ಬೆಳಗಾವಿ ಅಧಿವೇಶನದಲ್ಲಿ ನನ್ನ ಮೇಲೆ, ಮುಖ್ಯಮಂತ್ರಿಗಳು, ಎಂ.ಬಿ ಪಾಟೀಲರು ಹಾಗೂ ಆರ್.ಬಿ ತಿಮ್ಮಾಪುರ ಅವರ ಮೇಲೆ ಒತ್ತಡ ಹಾಕಿದರು” ಎಂದು ಹೇಳಿದರು.
“1,33,000 ಎಕರೆಗಳಿಗೆ ಇಂದು ಹಣವನ್ನು ಕೊಡಲು ತೀರ್ಮಾನ ಮಾಡಿ ಚೆಕ್ ಕೊಡಲು ಹೊರಟಿದ್ದೇವೆ. ಈ ತೀರ್ಮಾನ ನೋಡಿ ಕೃಷ್ಣ ಅಣೆಕಟ್ಟನ್ನು 524 ಅಡಿಗೆ ಏರಿಸಬಾರದು, ರೈತರಿಗೆ ಪರಿಹಾರ ನೀಡಬಾರದು ಎಂದು ಕೇಂದ್ರ ಸರ್ಕಾರದ ಮೇಲೆ ಆಂಧ್ರ ಸರ್ಕಾರ ಒತ್ತಡ ಹಾಕುತ್ತಿದೆ” ಎಂದು ದೂರಿದರು.
“ಮಹಾರಾಷ್ಟ್ರದವರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ನಮ್ಮ ನೀರು ನಮ್ಮ ಭೂಮಿ ನಮ್ಮ ಹಕ್ಕು ಎಂದು ನುಡಿದಂತೆ ನಡೆದಿದ್ದೇವೆ. 3 ಸಾವಿರ ಕೋಟಿ ರೂಪಾಯಿ ಈ ವರ್ಷವೇ ವಿತರಿಸಲು ನಿರ್ಧರಿಸಿದ್ದೇವೆ” ಎಂದು ಘೋಷಣೆ ಮಾಡಿದರು.




