ಉಡುಪಿ:ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಧಾರ್ಮಿಕ ಉತ್ಸವಾಗಿರುವ ಮಹಾ ಕುಂಭಮೇಳಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈಗಾಗಲೇ ಒಂದು ತಿಂಗಳಲ್ಲಿಯೇ 45 ಕೋಟಿ ಭಕ್ತರು ಭಾಗಿಯಾಗಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆಯಿತ್ತು ಆದರೆ ಆಯೋಜಕರ ನಿರೀಕ್ಷೆಗೂ ಮೀರಿದ ಜನದಟ್ಟಣೆಯಾಗುತ್ತಿದೆ.
ಜನವರಿ 13ರಿಂದ ಆರಂಭವಾದ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರ ಈಗಾಗಲೇ 45 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದು, ಇಂದು ಒಂದೇ ದಿನ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ.
144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾ ರಾಜನ ಮಹಾಕುಂಭಮೇಳಕ್ಕೆ ಕರ್ನಾಟದದಿಂದಲೂ ಅಸಂಖ್ಯಾತ ಜನರು ತೆರಳುತ್ತಿದ್ದು, ಇನ್ನೂ ಲಕ್ಷಾಂತರ ಭಕ್ತರು ಮಹಾ ಕುಂಭಮೇಳಕ್ಕೆ ತೆರಳಲು ಸಜ್ಜಾಗುತ್ತಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಇನ್ನೂ ಹದಿನೈದು ದಿನಗಳ ಕಾಲ ಮಹಾ ಕುಂಭಮೇಳ ನಡೆಯಲಿದೆ.
ಇದೀಗ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಿಂದ ಮಹಾ ಕುಂಭಮೇಳಕ್ಕೆ ತೆರಳಬೇಕು ಎಂದುಕೊಂಡಿರುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲೇ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಸಂಚರಿಸಲಿದೆ. ಈ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.




