ಸಿರುಗುಪ್ಪ : ತಾಲೂಕಿನ ಹೊನ್ನಾರಳ್ಳಿ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಹಾಗೂ ಶತಮಾನೋತ್ಸವ ನಿಮಿತ್ತ ಅದ್ದೂರಿಯಾಗಿ ಜರುಗಿದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿ ಮಹಾರಥೋತ್ಸವಕ್ಕೆ ವಳಬಳ್ಳಾರಿಯ ಸುವರ್ಣಗಿರಿ ವಿರಕ್ತ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದರು.
ರಥೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಮಹಾ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಿ ಸಹಸ್ರ ಬಿಲ್ವಾರ್ಚನೆ, ವಿವಿಧ ಫಲಪುಷ್ಪಗಳು, ಆಭರಣಗಳಿಂದ ಅಲಂಕರಿಸಿ ಮಹಾ ಮಂಗಳಾರತಿಗೈದು ವಿಶೇಷ ಪೂಜೆ ಸಲ್ಲಿಸಲಾಯಿತು. ಗಂಗೆ ಪೂಜೆ, ಪಲ್ಲಕ್ಕಿ ಸೇವೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸುತ್ತಮುತ್ತಲಿನ ಗ್ರಾಮಗಳಾದ ಇಬ್ರಾಹಿಂಪುರ, ಬಾಗೇವಾಡಿ, ಕುಡುದರಹಾಳ್, ಶ್ರೀಧರಗಡ್ಡೆ, ಚಿಕ್ಕಬಳ್ಳಾರಿ, ಹಚ್ಚೊಳ್ಳಿ, ವಳಬಳ್ಳಾರಿಯಿಂದ ಭಕ್ತಾದಿಗಳು ಆಗಮಿಸಿ ರಥಕ್ಕೆ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿ ಕಾರ್ಯಿ ಎಡೆ ನೈವೇದ್ಯ ಸಮರ್ಪಿಸಿ ಹರಕೆ ತೀರಿಸಿದರು.
ಶತಮಾನೋತ್ಸವ ಜಾತ್ರಾ ನಿಮಿತ್ತ ಗುರುವಾರದಂದು ಹೂವಿನ ರಥೋತ್ಸವ ಜರುಗಿದ್ದು, ದೇವಸ್ಥಾನದಲ್ಲಿ ಮಾ.6 ರಂದು ಪ್ರಾರಂಭಗೊಂಡ ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಮಹಾಮಂಗಲವಾಯಿತು.
ಪ್ರವಚನದಲ್ಲಿ ಜಗದ್ಗುರು ಕೊಟ್ಟೂರು ಸಂಸ್ಥಾನಮಠ ಬಳ್ಳಾರಿ, ಹೊಸಪೇಟೆ, ಹಾಲಕೆರೆಯ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿ, ಕರೆಗುಡ್ಡ ಮಹಾಂತೇಶ್ವರ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ, ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದರು.
ಮೈಸೂರಿನ ನಿರಂಜನ ದೇವರು ಪ್ರವಚನ ನೀಡಿದರು. ಕಾರಟಗಿ ಶರಣಕುಮಾರ್ ಗವಾಯಿ, ಕಂಚೆನೇಗಳೂರು ಷಣ್ಮುಖಯ್ಯ ಹಿರೇಮಠ ಪಿಟೀಲ್(ವಯೋಲಿನ್) ರಾಮಲಿಂಗಪ್ಪ ಬಗ್ಗೂರು ತಬಲ ಸಾಥ್ ನೀಡಿದರು.
ನರವೇಷದ ಹುಲಿ ಎಂಬ ಸಾಮಾಜಿಕ ಬಯಲು ನಾಟಕದ ಪ್ರದರ್ಶಿಸಲಾಯಿತು. ಶನಿವಾರ ಸಂಜೆ ಕಡುಬಿನಕಾಳಗ, ನಂದಿಕೋಲು, ಹಾಗೂ ಲಂಕಾದಹನ ಕಾರ್ಯಕ್ರಮಗಳು ಜರುಗಲಿವೆಂದು ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




