ತಿಪಟೂರು: ಆಧ್ಯಾತ್ಮಿಕ ಮತ್ತು ಧಾರ್ಮಿಕ ಶ್ರದ್ಧೆಯಿಂದ ಮಾತ್ರ ಮಾನವ ಜನ್ಮ ಸಾರ್ಥಕ ಎಂದು ಶೃಂಗೇರಿ ಶಾರದಾ ಪೀಠದ ಜಗ ದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳು ತಿಳಿಸಿದರು.
ತಿಪಟೂರಿನಲ್ಲಿ ಕಳೆದ 25 ವರ್ಷಗಳ ಹಿಂದೆ ಜಗದ್ಗು ರುಗಳ ಅಮೃತಹಸ್ತದಿಂದ ಉದ್ಘಾಟನೆ ಗೊಂಡ ಶೃಂಗೇರಿ ಮಠದ ರಜತ ಮಹೋ ತ್ಸವ ಸಮಾರಂಭದ ಸಾದ್ಯ ವಹಿಸಿ ಆರ್ಶೀವಚನ ನೀಡಿದ ಶ್ರೀಗಳು, ಜೀವನದಲ್ಲಿ ಹಣ, ಆಸ್ತಿ, ವಿದ್ಯಾಬ್ಯಾಸವಷ್ಟೇ ಸಂಪಾದನೆ ಯಲ್ಲ, ಆಧ್ಯಾತ್ಮಿಕ ಮನೋಭಾವವನ್ನು ಹೊಂದಿ ಧರ್ಮಾಚರಣೆಯ ಮೂಲಕ ಸಂಪಾದಿಸುವ ಪುಣ್ಯವೂ ಬಹಳ ಮುಖ್ಯ. ನಾವು ಸಂಪಾದಿಸಿದ ಹಣ, ಆಸ್ತಿ, ಅಧಿಕಾರಗಳು ನಮ್ಮನ್ನು ಮೋಕ್ಷದೆಡೆಗೆ ಕೊಂಡೊ ಯ್ಯುವುದಿಲ್ಲ. ನಾವು ಮಾಡಿದ ಸತ್ಕಾರ್ಯಗಳಿಂದ ಗಳಿಸಿದ ಪುಣ್ಯ ಜನ್ಮಜನ್ಮಕ್ಕೂ ನಮ್ಮೊಂದಿಗೆ ಬರುತ್ತದೆ. ಮೋಕ್ಷಕ್ಕೆ ಧರ್ಮವೊಂದೇ ಮಾರ್ಗ. ಧರ್ಮವನ್ನು ಬಿಟ್ಟು ಅಧರ್ಮದ ಹಾದಿಯಲ್ಲಿ ನಡೆದರೆ ಸದ್ಗತಿ ದೊರೆಯುವುದಿಲ್ಲ ಎಂದರು.
ಧಾರ್ಮಿಕ ಕಾರ್ಯಗಳನ್ನು ಮಾಡುವಾಗ ವಿಳಂಬ ಮಾಡಬಾರದು, ಶುಭಸ್ಯ ಶೀಘ್ರಂ ಎಂಬಂತೆ ಶುಭಕಾರ್ಯಗಳು ಶೀಘ್ರವಾಗಿ ನಡೆಯಬೇಕು. ಹಿರಿಯರು ಮುಂದಿನ ಪೀಳಿಗೆಗೆ ನಮ್ಮ ಧಾರ್ಮಿಕ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳು, ಆಚಾರ ವಿಚಾರಗಳನ್ನು ತಿಳಿಸಿ ಕೊಟ್ಟು ಅವರಲ್ಲಿ ಸಂಸ್ಕಾರವನ್ನು ಬೆಳೆಸಬೇಕು. ಧರ್ಮಶ್ರದ್ಧೆ, ಸಂಸ್ಕಾರಗಳು ನಮ್ಮನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲೂ ರಕ್ಷಿಸುತ್ತದೆ, ಧರ್ಮೋ ರಕ್ಷತಿ ರಕ್ಷಿತಃ ಇದು ಭಗವದ್ಗೀ ತೆಯ ಸಾರವಾಗಿದೆ. 1200 ವರ್ಷಗಳ ಹಿಂದೆಯೇ ಜಗದ್ಗುರು ಶಂಕರಾ ಚಾರ್ಯರು ಭಗವಂತನ ರೂಪದಲ್ಲಿ ಅವತರಿಸಿ ನಮ್ಮನ್ನೆಲ್ಲಾ ಸನ್ಮಾರ್ಗದ ಹಾದಿಯಲ್ಲಿ ನಡೆಯು ವಂತೆ ಉಪದೇಶವನ್ನು ನೀಡಿದ್ದಾರೆ. ಶಂಕರ ಭಗತ್ಪಾದರ ವಿಚಾರ ಗಳು, ಉಪದೇಶಗಳು ಹಾಗೂ ಅವರು ತೋರಿಸಿಕೊಟ್ಟ ಮಾರ್ಗ ದಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.
ಶಂಕರ ಮಠಕ್ಕೆ ಆಗಮಿಸಿದ ಜಗದ್ಗುರುಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಮಠದಲ್ಲಿರುವ ಶ್ರೀ ಶಂಕರ ಮಠ, ಶ್ರೀ ಶಕ್ತಿಗಣಪತಿ, ಶ್ರೀ ಶಾರದಾಂಬ, ಶ್ರೀ ಚಂದ್ರಮೌಳೇಶ್ವರ ಮತ್ತು ಶ್ರೀ ಜಗದ್ಗುರು ಶಂಕರಾಚಾರ್ಯರ ವಿಗ್ರಹಗಳಿಗೆ ಫಲಪಂಚಾಮೃತಾಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಜಗದ್ಗುರುಗಳು ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಮಠದಲ್ಲಿ ಶ್ರೀಚಕ್ರಾರ್ಚನೆ, ಶ್ರೀ ಶತಚಂಡೀಪುರಶ್ಚರಣೆ, ಶ್ರೀ ಸಹಸ್ರ ಮೋದಕ ಗಣಪತಿ ಹೋಮ, ಲಲಿತಾ ಸಹಸ್ರನಾಮ, ಅಖಂಡ ಪಾರಾಯಣ, ಲಕ್ಷಾರ್ಚನೆ, ಶತಚಂಡಿ ಮಹಾಯಾ ಗದ ಪೂರ್ಣಾಹುತಿ ನಂತರ ಶ್ರೀಗಳಿಂದ ತೀರ್ಥ, ಫಲಮಂತ್ರಾಕ್ಷತೆ ಕಾರ್ಯಕ್ರಮ ನೆರವೇರಿತು. ಬ್ರಾಹ್ಮಣ ಸಭಾದ ಪದಾಧಿ ಕಾರಿಗಳು, ತಿಪಟೂರು, ತುರುವೇಕೆರೆ, ಅರಸೀಕೆರೆ ಸೇರಿದಂತೆ ವಿವಿಧ ತಾಲ್ಲೂಕಿ ನಿಂದ ವಿಪ್ರಬಾಂದವರು, ಭಕ್ತರು ಆಗಮಿಸಿದ್ದರು.
ವರದಿ: ಗಿರೀಶ್ ಕೆ ಭಟ್