ಬೆಂಗಳೂರು: ರಾಜ್ಯ ಸರ್ಕಾರದ ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿಯನ್ನು ಅಳವಡಿಸುವ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶಿಸಿದೆ.
ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ಜಾರಿಗೊಳಿಸತಕ್ಕದ್ದು ಎಂದು ಹೇಳಲಾಗಿದೆ.
ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ(ನೇಮಕಾತಿ ಮುಂತಾದವುಗಳ ಮೀಸಲಾತಿ)(ತಿದ್ದುಪಡಿ) ಅಧಿನಿಯಮ, 2024ರ ಸೆಕ್ಷನ್ 4ರ ಸಬ್ ಸೆಕ್ಷನ್ “(5) ರಾಜ್ಯ ಸಿವಿಲ್ ಸೇವೆಗಳ ವೃಂದದಲ್ಲಿನ ಅಥವಾ ಸರ್ಕಾರಿ ವಲಯದ ಸಂಸ್ಥೆಗಳಲ್ಲಿನ ಯಾವುದೇ ಹುದ್ದೆಗೆ ನೇರ ನೇಮಕಾತಿ ಕೋಟಾದ ಎದುರು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಾಗ ಮೀಸಲಾತಿ ಕಲ್ಪಿಸಬೇಕೆಂದು ಹೇಳಲಾಗಿದೆ.
ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಸದಸ್ಯರಿಗೆ ನಿಯಮಿಸಬಹುದಾದ ಅಂಥ ವ್ಯಾಪ್ತಿ ಮತ್ತು ವಿಧಾನದಲ್ಲಿ ಸಾಕಷ್ಟು ಪ್ರಾತಿನಿಧ್ಯ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳತಕ್ಕದ್ದು:
ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ತಾತ್ಕಾಲಿಕ ಆಧಾರದಲ್ಲಿರತಕ್ಕದ್ದು ಮತ್ತು ಅದನ್ನು ನೇರ ನೇಮಕಾತಿ ಕೋಟಾದ ಎದುರು ಕ್ರಮಬದ್ಧಗೊಳಿಸತಕ್ಕದ್ದಲ್ಲ;
ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ನೇರ ನೇಮಕಾತಿ ಎದುರಾಗಿ ಮಂಜೂರಾದ ಹುದ್ದೆಗಳ ಶೇಕಡಾ ಹತ್ತರಷ್ಟನ್ನು ಮೀರತಕ್ಕದ್ದಲ್ಲ;
ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿಗಳ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ಅಧಿನಿಯಮ, 2024ರ ಪ್ರಾರಂಭದ ದಿನಾಂಕದಂದು ಅಥವಾ ಅದಕ್ಕೆ ಮೊದಲು ಹೊರಗುತ್ತಿಗೆ ಆಧಾರದ ಮೇಲಿನ ನೇಮಕಾತಿಯು ಮಂಜೂರಾದ ಹುದ್ದೆಗಳ ಸಂಖ್ಯಾಬಲದ ಶೇಕಡಾ ಹತ್ತರಷ್ಟು ಮೀರಿದ್ದರೆ, ಆಗ ಅಂಥ ನೇಮಕಾತಿಗಳನ್ನು ಪ್ರತಿ ವರ್ಷ ಶೇಕಡಾ ಹತ್ತರಷ್ಟು ಕಡಿಮೆಗೊಳಿಸತಕ್ಕದ್ದು. ಇನ್ನುಳಿದಂತೆ ಉಲ್ಲೇಖಿತ ಸುತ್ತೋಲೆಯ ಎಲ್ಲಾ ಅಂಶಗಳು ಯಥಾವತ್ತಾಗಿ ಜಾರಿಯಲ್ಲಿರುತ್ತವೆ ಎಂದು ಹೇಳಲಾಗಿದೆ.