ಭಾಲ್ಕಿ : ಸ್ವಾಮಿ ವಿವೇಕಾನಂದರು ಸಾರಿದ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶ ವಿದ್ಯಾರ್ಥಿಗಳು ಜೀವನದಲ್ಲಿ ಅನುಸರಿಸಿದರೇ ಬದುಕು ಸುಂದರವಾಗಿ ರೂಪಗೊಳ್ಳಲಿದೆ ಎಂದು ಮಾಜಿ ಶಾಸಕರು, ಗುರುಪ್ರಸನ್ನ ಜನಸೇವಾ ಮಹಿಳಾ ಸಂಸ್ಥೆಯ ಸಂಸ್ಥಾಪಕರು ಆಗಿರುವ ಪ್ರಕಾಶ ಖಂಡ್ರೆ ಹೇಳಿದರು.
ಪಟ್ಟಣದ ಗುರುಪ್ರಸನ್ನ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಎಸ್ಸಿ ಪದವಿ ವಿಭಾಗದ ಚಿನ್ನದ ಸಾಧಕಿ ಮಹೇಶ್ವರಿ ಶೀಲವಂತ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯ ಬಿಎಸ್ಸಿ ವಿಭಾಗದ ವಿದ್ಯಾರ್ಥಿನಿ ಮಹೇಶ್ವರಿ ಅವರು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಟಾಪರ್ ಸ್ಥಾನ ಪಡೆಯುವುದರ ಜತೆಗೆ ಎರಡು ಚಿನ್ನದ ಪದಕ ಗಳಿಸಿ ಗಡಿ ಜಿಲ್ಲೆ ಬೀದರ್ನ ಕೀರ್ತಿ ರಾಜ್ಯ ಮಟ್ಟಕ್ಕೆ ಪಸರಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ಆರ್ಥಿಕ ಸಂಕಷ್ಟದಿAದ ಈ ವಿದ್ಯಾರ್ಥಿನಿ ಪಿಯುಸಿ ನಂತರದ ಶಿಕ್ಷಣ ಮುಂದುವರೆಸಲು ಸಾಧ್ಯವಾಗಿರಲಿಲ್ಲ.
ಇಂತಹ ಸಂದರ್ಭದಲ್ಲಿ ಗುರುಪ್ರಸನ್ನ ಶಿಕ್ಷಣ ಸಂಸ್ಥೆ ಮುಂದೆ ಬಂದು ಈ ಬಡ ಪ್ರತಿಭಾನ್ವಿತ ಮಹೇಶ್ವರಿಗೆ ಕನಿಷ್ಠ ಶುಲ್ಕದಲ್ಲಿ ಬಿಎಸ್ಸಿ ಪದವಿ ಶಿಕ್ಷಣ ನೀಡಿತು.
ಇದರ ಸದುಪಯೋಗ ಪಡೆದ ವಿದ್ಯಾರ್ಥಿನಿ ಮಹೇಶ್ವರಿ ಅವರು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಶ್ರದ್ಧೆ, ಭಕ್ತಿಯಿಂದ ಅಭ್ಯಸಿಸಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವುದು ಸಂತಸ ತರಿಸಿದೆ ಎಂದರು.
ಈ ವಿದ್ಯಾರ್ಥಿನಿಯ ಸಾಧನೆ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ನಿಲ್ಲಬೇಕು. ಎಲ್ಲರಲ್ಲೂ ಪ್ರತಿಭೆ ಇದೆ. ಅದನ್ನು ಓದಿನ ಮೂಲಕ ಹೊರ ತರುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ನಿರ್ಧಿಷ್ಟ ಗುರಿ ಮೈಗೂಡಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ ಗಡಿ ಜಿಲ್ಲೆ ಬೀದರ್ನ ಹಿಂದುಳಿದ ಹಣಿ ಪಟ್ಟಿ ಕಳಚುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಡೈಮಂಡ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ ಭೋಸ್ಲೆ ಮಾತನಾಡಿ, ಸಾಧನೆಗೆ ಬಡತನ ಅಡ್ಡಿಯಾವುದಿಲ್ಲ ಎನ್ನುವುದಕ್ಕೆ ವಿದ್ಯಾರ್ಥಿನಿ ಮಹೇಶ್ವರಿ ಸಾಧಿಸಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಮಹೇಶ್ವರಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತರಗತಿ ಮಿಸ್ ಮಾಡಿಕೊಳ್ಳಬಾರದು. ಉಪನ್ಯಾಸಕರು ಹೇಳಿದ ಪಾಠವನ್ನು ಸರಿಯಾಗಿ ಮನವರಿಕೆ ಮಾಡಿಕೊಳ್ಳಬೇಕು. ಮನೆಯಲ್ಲಿ ತರಗತಿಯಲ್ಲಿ ಬೋಧಿಸಿದ ವಿಷಯಗಳು ಪುನಾರ್ವತಿತ ಮಾಡಿಕೊಂಡರೇ ಸಾಕು ನಿರೀಕ್ಷಿದಷ್ಟು ಪರೀಕ್ಷೆಯಲ್ಲಿ ಅಂಕ ಗಳಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಬಿಎಸ್ಸಿ ವಿಭಾಗದ ಪ್ರಾಚಾರ್ಯ ವಿಷ್ಣುವರ್ಧನ ಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ಉಮಾದೇವಿ ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷ ಗುರುಪ್ರಸಾದ ಖಂಡ್ರೆ, ಜಶಿಕ ಜಾಯ್ ಸೇರಿದಂತೆ ಹಲವರು ಇದ್ದರು.
ಅಂಕಿತಾ, ಸಂಜನಾ ಸ್ವಾಗತ ಗೀತೆ ನಡೆಸಿ ಕೊಟ್ಟರು.
ಮಹೇಶ ತೇಗಂಪುರೆ ಸ್ವಾಗತಿಸಿದರು. ರೇವಣಸಿದ್ದಯ್ಯ ಸ್ವಾಮಿ ನಿರೂಪಿಸಿದರು. ದೈವಶಲಾ ಬಿರಾದಾರ್ ವಂದಿಸಿದರು.
ವರದಿ : ಸಂತೋಷ ಬಿಜಿ ಪಾಟೀಲ




