ಚೆನ್ನೈ (ತಮಿಳುನಾಡು) : ವೈದ್ಯ, ಅವರ ಪತ್ನಿ ಮತ್ತು ಅವರ ಇಬ್ಬರು ಪುತ್ರರು ಮಾರ್ಚ್ 13 ರಂದು ಚೆನ್ನೈನ ತಿರುಮಂಗಲಂ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾಲಬಾಧೆಯಿಂದ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮೃತರನ್ನು ಡಾ. ಬಾಲಮುರುಗನ್ (52), ಅವರ ಪತ್ನಿ ಸುಮತಿ (47), ಮತ್ತು ಅವರ 19 ಮತ್ತು 17 ವರ್ಷ ವಯಸ್ಸಿನ ಇಬ್ಬರು ಪುತ್ರರು ಎಂದು ಗುರುತಿಸಲಾಗಿದೆ. ಸುಮತಿ ಅವರು ಹೈಕೋರ್ಟ್ ವಕೀಲರಾಗಿ ಅಭ್ಯಾಸ ನಡೆಸುತ್ತಿದ್ದರು.
ಕುಟುಂಬಸ್ಥರು 8:00 AM ವರೆಗೆ ಮನೆಯ ಬಾಗಿಲನ್ನ ತೆರೆಯದಿರುವುದನ್ನು ಕಂಡ ನೆರೆಹೊರೆಯವರು ಆತಂಕಕ್ಕೊಳಗಾಗಿದ್ದಾರೆ. ನಂತರ ಅವರನ್ನ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅವರು ತಿರುಮಂಗಲಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಮನೆಯೊಳಗೆ ಪ್ರವೇಶಿಸಿ ನಾಲ್ಕು ಶವಗಳನ್ನ ಪತ್ತೆ ಮಾಡಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಕುಟುಂಬವು ಸರಿಸುಮಾರು ರೂ. 5 ಕೋಟಿ ಸಾಲದಿಂದ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಸೂಚಿಸುತ್ತದೆ. ಇದು ಆತ್ಮಹತ್ಯೆಗೆ ಸಂಭಾವ್ಯ ಕಾರಣ ಎಂದು ಪರಿಗಣಿಸಲಾಗಿದೆ.