ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಶೀಘ್ರದಲ್ಲೇ ಭೂಮಿಗೆ ಮರಳಲಿದ್ದಾರೆ. ಅವರು ಒಂಬತ್ತು ತಿಂಗಳ ನಂತರ ಭೂ ದರ್ಶನ ಮಾಡುತ್ತಿದ್ದಾರೆ. ಗಗನಯಾತ್ರಿಗಳಿಬ್ಬರ ಸುರಕ್ಷಿತ ವಾಪಸಾತಿಗೆ ಪ್ರಪಂಚಾದ್ಯಂತ ಜನರು ಪ್ರಾರ್ಥಿಸುತ್ತಿದ್ದಾರೆ.
ಸುನೀತಾ ವಾಪಸಾತಿಯ ಬಗ್ಗೆ ಭಾರತದಲ್ಲಿರುವ ಅವರ ಕುಟುಂಬ ಸಂತಸ ವ್ಯಕ್ತಪಡಿಸಿದೆ. ಈ ಸಂತಸದ ನಡುವೆ, ಅವರ ಸೋದರ ಸಂಬಂಧಿಯ ಮುಖದಲ್ಲಿ ಚಿಂತೆಯ ಗೆರೆಗಳೂ ಇವೆ. ಆಕೆ ನಿಜವಾಗಿಯೂ ಭೂಮಿಗೆ ಕಾಲಿಟ್ಟಾಗ ಮಾತ್ರ ನಮಗೆ ನೆಮ್ಮದಿ ಎಂದು ಸಹೋದರ ದಿನೇಶ್ ರಾವಲ್ ಹೇಳಿದರು. ಇಡೀ ಕುಟುಂಬ ಮತ್ತು ಗ್ರಾಮ ಆಕೆಯ ಸುರಕ್ಷಿತವಾಗಿ ಮರಳುವುದಕ್ಕೆ ಪ್ರಾರ್ಥಿಸುತ್ತಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್ ರಾವಲ್, “ಸುನೀತಾ ನನ್ನ ಚಿಕ್ಕಪ್ಪನ ಮಗಳು. ನಮ್ಮ ಕುಟುಂಬ ತುಂಬಾ ಸೀಮಿತವಾಗಿದೆ. ಅವರು ಬಾಹ್ಯಾಕಾಶಕ್ಕೆ ಹೊರಡುವಾಗ ನಾನು ಅಮೆರಿಕಕ್ಕೆ ಹೋಗಿದ್ದೆ. ಆಗ ಅಲ್ಲಿ ನನ್ನನ್ನು ಭೇಟಿಯಾಗಲು ಸುನೀತಾ ಬಂದಿದ್ದರು. ನಾವು ಮೂರು-ನಾಲ್ಕು ದಿನಗಳ ಕಾಲ ಒಟ್ಟಿಗಿದ್ದೆವು” ಎಂದರು.
ನಾನು ಅವರಿಗೆ ನೀವು ಯಾಕೆ ಬಾಹ್ಯಾಕಾಶಕ್ಕೆ ಹೋಗುತ್ತಿದ್ದೀರಿ, ಬಾಹ್ಯಾಕಾಶಕ್ಕೆ ಹೋಗುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದೆ. ಆದರೆ, ಆಕೆ ಜಗತ್ತಿಗೆ ಏನನ್ನಾದರೂ ನೀಡುವ ಗುರಿಯೊಂದಿಗೆ ಇದ್ದಳು. ಅದಕ್ಕಾಗಿಯೇ ಬಾಹ್ಯಾಕಾಶಕ್ಕೆ ತೆರಳುವುದಕ್ಕೆ ನಿರ್ಧರಿಸಿದ್ದಳು ಎಂದು ಹೇಳಿದರು.
ನನಗೆ ಸಂತೋಷಕ್ಕಿಂತ ಹೆಚ್ಚು ಭಯವಿದೆ: ಒಂದೆಡೆ ನಮ್ಮ ಸಹೋದರಿ ಮರಳುತ್ತಿರುವುದಕ್ಕೆ ಸಂತೋಷವಿದೆ, ಮತ್ತೊಂದೆಡೆ ಆತಂಕವೂ ಇದೆ. ನಾನು ಸಂತೋಷವಾಗಿ ಕಾಣಿಸಬಹುದು, ಆದರೆ ನನಗೆ ಭಯವಾಗಿದೆ. ಅವರು ಭೂಮಿಗೆ ಉತ್ತಮ ಆರೋಗ್ಯದಿಂದ ಹಿಂತಿರುಗಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದರು.
ಸುನೀತಾ ಚಿಕ್ಕ ವಯಸ್ಸಿನಿಂದಲೂ ಧೈರ್ಯಶಾಲಿ: ಸುನೀತಾ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡ ಸಹೋದರ, “ಅವಳು ಚಿಕ್ಕವಳಿದ್ದಾಗ ಭಾರತಕ್ಕೆ ಬಂದಿದ್ದಳು. ನಾನು ಅವಳನ್ನು ಒಂಟೆ ಸವಾರಿಗೆ ಕರೆದುಕೊಂಡು ಹೋಗುತ್ತಿದ್ದೆ. ಅವಳು ಒಂಟೆಯಿಂದ ಇಳಿಯುತ್ತಿರಲಿಲ್ಲ. ನಾವು ಸೋಮನಾಥಕ್ಕೆ ತೀರ್ಥಯಾತ್ರೆ ಮಾಡಿದೆವು. ಅಷ್ಟೇ ಅಲ್ಲ, ಭಾರತದ ವಿವಿಧ ಸ್ಥಳಗಳಿಗೂ ಪ್ರಯಾಣಿಸಿದೆವು. ನಾನು ಬೋಸ್ಟನ್ನಲ್ಲಿ ಅವರ ಮದುವೆಗೆ ಹಾಜರಿದ್ದೆ” ಎಂದು ರಾವಲ್ ಹೇಳಿದರು.