ತುರುವೇಕೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಯುವ ವಿವಿಧ ವಸತಿ ಶಾಲೆಗಳಿಗೆ 6 ನೇ ತರಗತಿ ಪ್ರವೇಶಕ್ಕೆ ದಾಖಲಾತಿ ಪಡೆಯಲು ನಡೆಯುವ ಪರೀಕ್ಷೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಅಂಬೇಡ್ಕರ್ ಸೇರಿದಂತೆ ತುರುವೇಕೆರೆ ತಾಲ್ಲೂಕಿನಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ 6 ನೇ ತರಗತಿಗೆ ಪ್ರವೇಶ ಪಡೆಯಲು ತಾಲ್ಲೂಕಿನ ನೂರಾರು ಹಳ್ಳಿಗಳ ಸುಮಾರು 451 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಮೂವರು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು 448 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು. ಇಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದ ಪರೀಕ್ಷೆ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಿತು. 150 ನಿಮಿಷದ ಕಾಲಾವಧಿಯ ಪರೀಕ್ಷೆಯಲ್ಲಿ 120 ನಿಮಿಷಗಳನ್ನು ಪ್ರಶ್ನೆಗಳಿಗೆ ಉತ್ತರಿಸಲು ನಿಗದಿಪಡಿಸಲಾಗಿತ್ತು. ಗರಿಷ್ಠ 100 ಅಂಕಗಳ ಪರೀಕ್ಷೆಯಲ್ಲಿ ಶಾಂತ ಚಿತ್ತದಿಂದ ಮಕ್ಕಳು ಪರೀಕ್ಷೆ ಬರೆದರು. ಪರೀಕ್ಷೆಯು ಕಾಲೇಜಿನ 19 ಕೊಠಡಿಗಳಲ್ಲಿ ನಡೆದಿದ್ದು, ಎಲ್ಲಾ ಕೊಠಡಿಗಳಿಗೂ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಸಲಾಯಿತು.

ಬೆಳಿಗ್ಗೆಯೇ ವಿವಿಧ ಗ್ರಾಮಗಳಿಂದ ಪರೀಕ್ಷಾ ಕೇಂದ್ರಕ್ಕೆ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದು, ಪರೀಕ್ಷೆ ಮುಗಿಯುವವರೆಗೆ ಕೇಂದ್ರದ ಹೊರಗೆ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪರೀಕ್ಷಾ ಮುಖ್ಯಸ್ಥರಾಗಿ ವಿ.ಎನ್.ನಂಜೇಗೌಡ, ಸಹಾಯಕರಾಗಿ ಉಪನ್ಯಾಸಕಿ ಕೋಮಲ, ಪ್ರಶ್ನೆಪತ್ರಿಕೆ ಪಾಲಕರಾಗಿ ಸುರೇಶ್, ವಿಶೇಷ ಜಾಗೃತದಳದ ಅಧಿಕಾರಿಯಾಗಿ ಪಾಪಣ್ಣ, ಪರೀಕ್ಷಾ ವೀಕ್ಷಕರಾಗಿ ಹನುಮಂತರಾಯಪ್ಪ ಕಾರ್ಯನಿರ್ವಹಿಸಿದರು.
ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ಕುಂ.ಇ.ಅಹಮದ್ ಮಾಧ್ಯಮದೊಂದಿಗೆ ಮಾತನಾಡಿ, ತುರುವೇಕೆರೆ ತಾಲ್ಲೂಕಿನಲ್ಲಿನ ವಿವಿಧ ವಸತಿ ಶಾಲೆಗಳಲ್ಲಿ 6 ನೇ ತರಗತಿ ಪ್ರವೇಶಕ್ಕೆ ಸುಮಾರು 448 ಮಕ್ಕಳು ಪರೀಕ್ಷೆ ಬರೆದಿದ್ದು, ಆ ಎಲ್ಲಾ ಪುಟಾಣಿ ಮಕ್ಕಳಿಗೆ ಒಳ್ಳೆಯದಾಗಲಿ ಎಂದರು.

ಸರ್ಕಾರ ರಾಜ್ಯದ ಬಡವರು, ಕೂಲಿಕಾರ್ಮಿಕರು, ರೈತರು ಸೇರಿದಂತೆ ಎಲ್ಲಾ ಜಾತಿ, ಧರ್ಮದ ಮಕ್ಕಳಿಗೂ ಊಟ, ವಸತಿ ಜೊತೆಗೆ ಉಚಿತವಾಗಿ ಅಕ್ಷರ ಕಲಿಸಬೇಕೆಂಬ ಉದ್ದೇಶದಿಂದ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ. 6 ನೇ ತರಗತಿಯಿಂದ 10 ನೇ ತರಗತಿವರೆಗೆ ಉಚಿತವಾಗಿ ಅಧ್ಯಯನ ಮಾಡಲು ವಸತಿ ಶಾಲೆಗಳಲ್ಲಿ ಅವಕಾಶವಿದೆ. ತದನಂತರದಲ್ಲಿ ಪದವಿ ಪೂರ್ವ ಶಿಕ್ಷಣಕ್ಕೂ ವಸತಿ ಶಾಲೆಗಳಿದೆ. ಯಾವ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ, ಕುಟುಂಬ ನಿರ್ವಹಣೆಯ ಜೊತೆಗೆ ಮಕ್ಕಳಿಗೆ ಶಿಕ್ಷಣ ದೊರಕಿಸಲು ಕಷ್ಟವಾಗುತ್ತಿದೆ, ಮಕ್ಕಳಲ್ಲಿ ಪ್ರತಿಭೆ ಇದ್ದರೂ ಶಾಲೆಗೆ ಕಳಿಸಲು ಆರ್ಥಿಕವಾಗಿ ಸಬಲರಿಲ್ಲ ಅಂತಹ ಕುಟುಂಬಗಳಿಗೆ ವಸತಿ ಶಾಲೆ ಉಚಿತವಾಗಿ ಆಹಾರದ ಜೊತೆಗೆ ಉಚಿತ ಶಿಕ್ಷಣವನ್ನೂ ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಹಾಗೂ ಸಮಾಜದಲ್ಲಿ ಸತ್ರ್ಪಜೆಗಳನ್ನಾಗಿ ರೂಪಿಸುತ್ತದೆ ಎಂದರು.
ವರದಿ: ಗಿರೀಶ್ ಕೆ ಭಟ್




