ತೆಲಂಗಾಣ : ನನ್ನ ಮತ್ತು ನಮ್ಮ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸುದ್ದಿ ಮಾಡುವವರ ಬಟ್ಟೆ ಬಿಚ್ಚಿಸಿ ನಡು ರೋಡಲ್ಲಿ ಮೆರವಣಿಗೆ ಮಾಡುತ್ತೇನೆ ಎಂದು ಸಿಎಂ ರೇವಂತ್ ರೆಡ್ಡಿ ಸದನದ ಮೂಲಕ ಆನ್ಲೈನ್ ಪತ್ರಿಕೋದ್ಯಮದಲ್ಲಿ ತೊಡಗಿದವರನ್ನ ಗುರಿಯಾಗಿಸಿ ವಾರ್ನಿಂಗ್ ಮಾಡಿದರು.
ರಾಜ್ಯ ಸರ್ಕಾರ ಸಾಕಷ್ಟು ಕಲ್ಯಾಣ ಯೋಜನೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ, ರೈತನೊಬ್ಬ ರೇವಂತ್ ರೆಡ್ಡಿ, ಅವರ ತಾಯಿ ಮತ್ತು ತೆಲಂಗಾಣ ಕಾಂಗ್ರೆಸ್ ಅನ್ನು ನಿಂದಿಸುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಹೈದರಾಬಾದ್ ನ ಸೈಬರ್ ಅಪರಾಧ ಪೊಲೀಸರು ಇಬ್ಬರು ಯುಟ್ಯೂಬ್ ಪತ್ರಕರ್ತರನ್ನು ಬಂಧಿಸಿದ್ದಾರೆ.
ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ ಸಿಎಂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆ ಎಂದು ನಾನು ಸುಮ್ಮನಿದ್ದೇನೆ. ನನ್ನ, ನಮ್ಮ ಕುಟುಂಬದ ಬಗ್ಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಅದನ್ನು ಕೇಳಿದರೆ ನನ್ನ ರಕ್ತ ಕುದಿಯುತ್ತದೆ.
ರಾಜಕೀಯ ಟೀಕೆಯ ಹೆಸರಿನಲ್ಲಿ ತಮ್ಮ ಕುಟುಂಬದ ವಿರುದ್ಧ ನಿಂದನೀಯ ಭಾಷೆ ಬಳಸುವುದನ್ನು ಖಂಡಿಸಿದ ಅವರು, ಅಂತಹವರನ್ನ ಬೀದಿಗಳಲ್ಲಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುವೆ ಎಂದರು.
ಮಾಧ್ಯಮ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಕಾನೂನುಗಳಿಗೆ ತಿದ್ದುಪಡಿಗಳನ್ನು ಮತ್ತು ಆನ್ಲೈನ್ ಪತ್ರಿಕೋದ್ಯಮದ ಯುಗದಲ್ಲಿ ಪತ್ರಕರ್ತರಾಗಿ ಯಾರು ಅರ್ಹರು ಎಂಬುವುದನ್ನು ಮರು ವ್ಯಾಖ್ಯಾನಿಸುವ ಪ್ರಸ್ತಾಪವನ್ನೂ ಅವರು ಪ್ರಸ್ತಾಪಿಸಿದರು.
ಯೂಟ್ಯೂಬ್ ಚಾನೆಲ್ ಅನ್ನು ಸ್ಥಾಪಿಸಿ ಅವರಿಗೆ ಇಷ್ಟವಾದದನ್ನು ಹೇಳುತ್ತಿದ್ದಾರೆ… ಆದರೆ ಕುಟುಂಬ ಸದಸ್ಯರ ವಿರುದ್ಧ ಕೆಟ್ಟ ಭಾಷೆ ಬಳಸಿದ್ದಕ್ಕೆ ನನ್ನ ರಕ್ತ ಕುದಿಯುತ್ತಿದೆ.
ನಾವು ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳಾಗಿರುವುದರಿಂದ ನೀವು ನಮ್ಮ ಕೆಲಸಗಳ ಬಗ್ಗೆ ಟೀಕಿಸಬಹುದು ಮತ್ತು ವಿಶ್ಲೇಷಿಸಬಹುದು. ಆದರೆ ನಮ್ಮ ವೈಯಕ್ತಿಕ ವಿಷಯಗಳ ಮೇಲೆ ಏಕೆ ದಾಳಿ ಮಾಡುತ್ತೀರಿ ಎಂದು ರೇವಂತ್ ರೆಡ್ಡಿ ಗುಡುಗಿದರು.