ಬೆಂಗಳೂರು: ಜಾತಕ ದೋಷಕ್ಕೆ ಪೂಜೆಯ ಹೆಸರಿನಲ್ಲಿ ಮಹಿಳಾ ಕಾನ್ಸ್ಟೇಬಲ್ ಹಾಗೂ ಅವರ ಸ್ನೇಹಿತೆಯಿಂದ 6.49 ಲಕ್ಷ ರೂ. ಪಡೆದು ವಂಚಿಸಿದ ಆರೋಪಿಯನ್ನು ನಗರದ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕಾನ್ಸ್ಟೇಬಲ್ವೊಬ್ಬರ ಬಳಿ ಪೂಜೆ, ಆತ್ಮದ ಕಥೆ ಕಟ್ಟಿ ವಂಚಿಸಿದ ಆರೋಪದಡಿ ಕಲಬುರಗಿ ಮೂಲದ ಹೇಮಂತ್ ಭಟ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಸ್ಟೇಬಲ್ಗೆ ಸ್ನೇಹಿತೆಯ ಮೂಲಕ ಆರೋಪಿ ಹೇಮಂತ್ ಭಟ್ ಪರಿಚಯವಾಗಿತ್ತು. ಜಾತಕ ಪರಿಶೀಲಿಸಿದ್ದ ಆರೋಪಿಯು ನಿನ್ನ ದೇಹದಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಹದಿನೈದು ಇತರೆ ಆತ್ಮಗಳು ಸೇರಿವೆ. ಆದ್ದರಿಂದಲೇ ಸಮಸ್ಯೆಯಾಗುತ್ತಿದೆ, ಇನ್ನೂ ನಿನಗೆ ಮದುವೆ ಸಹ ಆಗುತ್ತಿಲ್ಲ. ಶಾಂತಿ ಮಾಡಿಸದಿದ್ದರೆ ಪ್ರಾಣ ಹಾನಿಯಾಗುತ್ತದೆ ಎಂದು ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬಳಿಕ ಖಾಸಗಿ ಕೋರಮಂಗಲದ ಹೋಟೆಲ್ವೊಂದರಲ್ಲಿ ಪೂಜೆ ಮಾಡಿದ್ದ ಆರೋಪಿ ದೂರುದಾರೆ ಮತ್ತು ಆಕೆಯ ಸ್ನೇಹಿತೆಯಿಂದ ಹಂತಹಂತವಾಗಿ ಒಟ್ಟು 6.49 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ. ಆದರೆ ಪೂಜೆಯ ಬಳಿಕವೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ ಹಣ ವಾಪಸ್ ನೀಡುವಂತೆ ದೂರುದಾರೆ ಕೇಳಿದ್ದರು. ಹಣವನ್ನೂ ವಾಪಾಸ್ ಮಾಡದೆ, ಫೋನ್ ಕರೆ ಸ್ವೀಕರಿಸದೆ ವಂಚಿಸಿದ ಆರೋಪಿಯ ವಿರುದ್ಧ ನೊಂದ ಮಹಿಳಾ ಕಾನ್ಸ್ಟೇಬಲ್ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
‘ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಕಲಬುರಗಿಯಲ್ಲಿದ್ದ ಆರೋಪಿ ಹೇಮಂತ್ ಭಟ್ನನ್ನು ಬಂಧಿಸಿದ್ದೇವೆ’ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.




