ಚಿಕ್ಕೋಡಿ ಪಟ್ಟಣದ ಸಿ ಟಿ ಇ ಶಿಕ್ಷಣ ಸಂಸ್ಥೆಯು ನವೀಕರಿಸದೇ ವಿವಿಧ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಕಾನೂನುಬಾಹಿರವಾಗಿದೆ.
ಕೂಡಲೇ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಅಂಬೇಡ್ಕರ ಜನಜಾಗೃತಿ ಸೇವಾ ಸಂಘದ ಅಧ್ಯಕ್ಷ ರಾವಸಾಹೇಬ ಫಕೀರೆ ಸರ್ಕಾರಕ್ಕೆ ಒತ್ತಾಯಿಸ ಲಾಗುತ್ತಿದೆ.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಹಿಂದಿನ ನಿರ್ದೇಶಕರ ಮಂಡಳಿ ಶಿಸ್ತುಬದ್ಧವಾಗಿ ಹಾಗೂ ವ್ಯವಸ್ಥಿತ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿತ್ತು. ಆದರೆ ಪ್ರಸ್ತುತ ನಿರ್ದೇಶಕರ ಮಂಡಳಿ ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದು, ಸಂಸ್ಥೆಯ ಭವಿಷ್ಯಕ್ಕೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದರು.
ಈ ಅಕ್ರಮಗಳನ್ನು ಸಕಾಲದಲ್ಲಿ ಸರಿಪಡಿಸದಿದ್ದರೆ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶತಮಾನೋತ್ಸವ ಪೂರೈಸಿದ ಸಿಟಿಇ ಸಂಸ್ಥೆಯಲ್ಲಿ ಪಿಟಿಆರ್ ನವೀಕರಣವಿಲ್ಲದೆ ಅವ್ಯವಹಾರಗಳು ನಡೆಯುತ್ತಿವೆ. ಪಿಟಿಆರ್ ನವೀಕರಣವಾಗುವವರೆಗೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು. ಸಂಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಡಿಡಿಪಿಐ ಸೀತಾರಾಮ ಹಾಗೂ ಪದವಿಪೂರ್ವ ಉಪನಿರ್ದೇಶಕ ಪಿ.ಐ. ಭಂಡಾರೆ ಅವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಸರ್ಕಾರ ತಕ್ಷಣ ಕ್ರಮ ಜರುಗಿಸಬೇಕೆಂದು ಹೇಳಿದರು.
ಸಿಟಿಇ ಸಂಸ್ಥೆಯು ಶಿಕ್ಷಣ ಅಧಿಕಾರಿಗಳ ಸಹಾಯದಿಂದ ಕಾನೂನುಬಾಹಿರ ನಿರ್ಧಾರಗಳನ್ನು ತೆಗೆದುಕೊಂಡು ಉತ್ತಮ ಹೆಸರಿಗೆ ಕಳಂಕ ತರುತ್ತಿದೆ. 11 ವಿವಿಧ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸಿಟಿಇಯಲ್ಲಿ ಹಲವು ಹುದ್ದೆಗಳು ಖಾಲಿಯಿದ್ದರೂ ಇಂದಿಗೂ ಭರ್ತಿಯಾಗಿಲ್ಲ ಎಂದು ಅವರು ದೂರಿದರು.
ಸಂಘದ ಉಪಾಧ್ಯಕ್ಷ ಅಪ್ಪಾಸಾಹೇಬ ಬ್ಯಾಳಿ ಮಾತನಾಡಿ, ಸಿಟಿಇ ಸಂಸ್ಥೆಯ ಅನುದಾನಿತ ಆರ್.ಡಿ. ಪದವಿಪೂರ್ವ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕ ಎ.ಎ. ಕಾಂಬಳೆ ಅವರಿಗೆ ಪ್ರಾಚಾರ್ಯರಾಗಿ ಪದೋನ್ನತಿ ನೀಡಿ, ಕೆಲವೇ ದಿನಗಳಲ್ಲಿ ಹಿಂಬಡ್ತಿ ನೀಡಿರುವುದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಕಾಂಬಳೆ ಅವರಿಗೆ 2018ರಲ್ಲಿ ಪ್ರಾಚಾರ್ಯರಾಗಿ ಮುಂಬಡ್ತಿ ನೀಡಿದ್ದು, ಯಾವುದೇ ನೋಟಿಸ್ ಇಲ್ಲದೆ 2023ರಲ್ಲಿ ಹಿಂಬಡ್ತಿ ನೀಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಸುದರ್ಶನ ತಮಣ್ಣವರ, ಮಹಾದೇವ , ನಿರಂಜನ ಕಾಂಬಳೆ, ವಿದ್ಯಾಧರ ಚಿತಾಳೆ, ನಂದಕು ದರಬಾರೆ, ಬಜರಂಗ ಅಮ್ಮಣಗಿ, ಅಶೋಕ ಮಾಳಗೆ, ಮಾರುತಿ ಕಾಂಬಳೆ, ಮನೋಹರ ಬಾಳನಾಯಕ್, ಭೀಮರಾವ್ ನಾಡಕರ್ಣಿ, ಮನೋಹರ ಮಲಕಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




