ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡುವ ಸಂದರ್ಭದಲ್ಲಿ ಶಿಶುವಿನ ತಲೆಗೆ ಕತ್ತರಿ ತಾಗಿ ಮಗುಗೆ ಗಾಯವಾದ ಆರೋಪ ಹಾವೇರಿ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಮೊಹಮ್ಮದ್ ಮುಜಾಹಿದ್ ಎಂಬುವವರ ಪತ್ನಿ ಬೇಬಿ ಅಸ್ಸಾ ಗರ್ಭಿಣಿಯಾಗಿದ್ದರು. ಹೆರಿಗೆ ನೋವು ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ಬಂದಿದ್ದರು.
ಶುಕ್ರವಾರ ಸೀಸೇರಿಯನ್ ಮಾಡುವುದಾಗಿ ಹೇಳಿದ್ದ ಡಾ. ಸ್ವಾತಿ ಹಾಗೂ ತಂಡದವರು, ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದೊಯ್ದಿದ್ದರು.
ಸಿಸೇರಿಯನ್ ಮುಗಿಯುತ್ತಿದ್ದಂತೆ ಶಿಶುವಿನ ಬಗ್ಗೆ ಪೋಷಕರಿಗೆ ಮಾಹಿತಿ ತಿಳಿಸಿದ್ದ ವೈದ್ಯರು, ಸಿಸೇರಿಯನ್ ಮಾಡುವ ಸಂದರ್ಭದಲ್ಲಿ ಹೊಟ್ಟೆಯಲ್ಲಿದ್ದ ಮಗುವನ್ನು ಹೊರಗೆ ತೆಗೆಯಲು ಸಾಕಷ್ಟು ಕಷ್ಟವಾಯಿತು. ಇದೇ ಸಂದರ್ಭದಲ್ಲಿ ತಲೆಗೆ ಕತ್ತರಿ ತಾಗಿದೆ.
ಎರಡು ಹೊಲಿಗೆ ಹಾಕಿದ್ದೇವೆ ಎಂದಿದ್ದಾರೆ. ಜೊತೆಗೆ ತಲೆಗೆ ಹೊಲಿಗೆ ಹಾಕಿದ ಸ್ಥಿತಿಯಲ್ಲಿಯೇ ಶಿಶುವನ್ನು ಶಸ್ತ್ರಚಿಕಿತ್ಸೆ ಕೊಠಡಿಯಿಂದ ಹೊರಗೆ ತಂದ ವೈದ್ಯರು, ಪೋಷಕರಿಗೆ ನೀಡಿದರು.
ಘಟನೆಯ ಹಿನ್ನೆಲೆಯಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಯಲ್ಲಿ ನಿತ್ಯವೂ ಹೇರಿಗೆ ಆಗುತ್ತವೆ. ಆದರೆ, ನಮ್ಮ ಮಗುವಿನ ವಿಷಯದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಅವರ ನಿರ್ಲಕ್ಷ್ಯದಿಂದಲೇ ಮಗುವಿನ ತಲೆಗೆ ಗಾಯವಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.




