ಬೆಳಗಾವಿ : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರವರ ಉಚ್ಚಾಟನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ
ಬಸನಗೌಡ ಪಾಟೀಲ್ ಯತ್ನಾಳ್ರವರು ಎಂದಿಗೂ ಬಿಜೆಪಿ ವಿರುದ್ಧವಾಗಿ ನಡೆದುಕೊಂಡಿಲ್ಲ..ಅವರು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ, ಬದಲಿಗೆ ಅವರು ಉತ್ತರ ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ್ದಾರೆ ಎಂದು ಯತ್ನಾಳ್ ಪರ ಬ್ಯಾಟ್ ಬೀಸಿದ ಪಂಚಮಸಾಲಿ ಶ್ರೀ, ಕೂಡಲೇ ಯತ್ನಾಳ್ ಅವರನ್ನು ಉಚ್ಚಾಟಿಸಿರುವ ಆದೇಶವನ್ನು ಬಿಜೆಪಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ತನ್ನ ನಿರ್ಧಾರವನ್ನು ಬದಲಿಸಬೇಕು.. ಇಲ್ಲವಾದಲ್ಲಿ ಎಲ್ಲ ಲಿಂಗಾಯತ ಶಾಸಕರು ಬಿಜೆಪಿಯನ್ನು ತೊರೆದು ಹೊರಬರಬೇಕು ಎಂದು ಇದೇ ವೇಳೆ ಶ್ರೀಗಳು ಆಗ್ರಹಿಸಿದ್ದಾರೆ
ಇನ್ನು ಬೆಳಗಾವಿಯ ಗಾಂಧಿ ಭವನದಲ್ಲಿ ಶೀಘ್ರದಲ್ಲೇ ಎಲ್ಲ ಪದಾಧಿಕಾರಿಗಳು, ಯುವ ಘಟಕ, ರೈತ ಘಟಕದ ಸದಸ್ಯರ ಸಭೆ ಕರೆಯುತ್ತೇನೆ ಎಂದ ಶ್ರೀಗಳು ಯತ್ನಾಳ್ರವರ ಉಚ್ಚಾಟನೆಯ ಹಿಂದೆ ದುಷ್ಟಶಕ್ತಿಗಳ ಕೈವಾಡವಿದೆ ಎಂದು ಕಿಡಿ ಕಾರಿದರು.
ಇದೇ ವೇಳೆ ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಎಂದು ಪ್ರಶ್ನಿಸಿದ ಶ್ರೀಗಳು ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ 30 ಸ್ಥಾನಗಳು ಕೂಡ ಬರೋದಿಲ್ಲ ಎಂದು ವಾಗ್ದಾಳಿ ನಡೆಸಿದ್ರು.