ಬೆಂಗಳೂರು: ಐದು ವರ್ಷವೂ ನಾನೇ ಮುಖ್ಯಮಂತ್ರಿ, ಪವರ್ ಶೇರಿಂಗ್ ಚರ್ಚೆ ಇಲ್ಲ ಎಂಬ ಸಿದ್ದರಾಮಯ್ಯ ದೆಹಲಿಯಲ್ಲಿ ಕುಳಿತು ನೀಡಿರುವ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರು ಕೊಟ್ಟ ಸಂದೇಶ ಮ್ಯಾಚ್ ಕ್ಲೋಸ್ ಅಂತ.ಇಂದಿನಿಂದ ಬದಲಾವಣೆ ಚರ್ಚೆ ನಿಲ್ಲಬೇಕು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬದಲಾವಣೆ ಬಗ್ಗೆ ಯಾರು ಮಾತನಾಡುತ್ತಿದ್ದರೋ ಅವರಿಗೂ ಇದು ಕ್ಲೀಯರ್ ಮೆಸೇಜ್. ಇಂದಿನಿಂದ ಬದಲಾವಣೆ ಚರ್ಚೆ ಕ್ಲೋಸ್ ಆಗಬೇಕು ಎಂದು ಹೇಳಿದರು.
ಸಿದ್ದರಾಮಯ್ಯನವರೇ ಹೇಳಿದ ಮೇಲೆ ಎಲ್ಲದಕ್ಕೂ ಇತಿಶ್ರೀ ಇದ್ದಂತೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ಇನ್ನು ಇತಿಶ್ರೀ ಹಾಡಬೇಕು. ಸಿದ್ದರಾಮಯ್ಯ ಹೇಳಿರುವುದರಲ್ಲಿ ಹೊಸದೇನಿಲ್ಲ. ಈಗ ಹೇಳಬೇಕಾದ ಸಂದರ್ಭ ಬಂದಿದೆ. ಅದಕ್ಕೆ ಹೇಳಿದ್ದಾರೆ. ಸಿಎಂ ಬದಲಾವಣೆ ಚರ್ಚೆ ಎಲ್ಲಿಯೂ ಆಗಿಲ್ಲ. ಅಧಿಕಾರ ಹಂಚಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.