ನಾಳೆಯಿಂದ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಹಬ್ಬ ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಗೆಲುವಿಗಾಗಿ ಪೈಪೋಟಿ ನಡೆಸಲಿವೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸುತ್ತಿದೆ.
ಎರಡೂ ತಂಡಗಳು ಹೊಸ ನಾಯಕರೊಂದಿಗೆ ಕಣಕ್ಕಿಳಿಯುತ್ತಿವೆ. ಆರ್ಸಿಬಿಯನ್ನು ಮುನ್ನಡೆಸುವ ಜವಾಬ್ದಾರಿ ರಜತ್ ಪಾಟೀದರ್ ಕೈಯಲ್ಲಿದ್ದರೆ, ಕೆಕೆಆರ್ ತಂಡವನ್ನು ಹಿರಿಯ ಮತ್ತು ಅನುಭವಿ ಆಟಗಾರ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ದೂರಾದ RCB ಆತಂಕ: IPL ಪ್ರಾರಂಭಕ್ಕೂ ಮುನ್ನವೇ ಆರ್ಸಿಬಿ ಎಡಗೈ ಬ್ಯಾಟರ್ ಫಾರ್ಮ್ಗೆ ಮರಳಿದ್ದಾರೆ. ಕಳೆದ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿ ಟೀಕೆಗೆ ಗುರಿಯಾಗಿದ್ದ ದೇವದತ್ ಪಡಿಕ್ಕಲ್ ಅವರನ್ನು ಈ ಬಾರಿ ನಂಬಿಕೆ ಇರಿಸಿ ಆರ್ಸಿಬಿ, ತಂಡಕ್ಕೆ ಸೇರಿಸಿಕೊಂಡಿದೆ.
ಇದೀಗ ಟೂರ್ನಿ ಪ್ರಾರಂಭಕ್ಕೂ ಮೊದಲೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಪಡಿಕ್ಕಲ್, ಆರ್ಸಿಬಿ ಇಟ್ಟ ನಂಬಿಕೆ ಉಳಿಸಿಕೊಂಡಿದ್ದಾರೆ. ಕೇವಲ 48 ಎಸೆತಗಳಲ್ಲಿ 82 ರನ್ ಸಮೇತ ಅರ್ಧಶತಕ ಪೇರಿಸಿದ್ದಾರೆ. ಇದರೊಂದಿಗೆ ಫಾರ್ಮ್ಗೆ ಮರಳಿರುವ ಸೂಚನೆ ನೀಡಿದ್ದಾರೆ.
5 ವರ್ಷಗಳ ಹಿಂದೆ IPL ಜರ್ನಿ ಪ್ರಾರಂಭ: ದೇವದತ್ ಪಡಿಕ್ಕಲ್ ಐದು ವರ್ಷಗಳ ಹಿಂದೆ ತಮ್ಮ ಐಪಿಎಲ್ ವೃತ್ತಿಜೀವನ ಪ್ರಾರಂಭಿಸಿದ್ದರು. ಆರ್ಸಿಬಿ ಪರ IPLಗೆ ಪಾದಾರ್ಪಣೆ ಮಾಡಿರುವ ಅವರು ಮೊದಲ ಸೀಸನ್ನಲ್ಲಿ 15 ಪಂದ್ಯಗಳಲ್ಲಿ 31.53 ಸರಾಸರಿಯಲ್ಲಿ 473 ರನ್ ಗಳಿಸಿದರು. ಇದರಲ್ಲಿ ಐದು ಅರ್ಧಶತಕಗಳು ಸೇರಿವೆ.
ಮುಂದಿನ ಆವೃತ್ತಿಯಲ್ಲಿಯೂ ಆರ್ಸಿಬಿ ಪರ ಆಡುವುದನ್ನು ಮುಂದುವರೆಸಿದ ಪಡಿಕ್ಕಲ್, ಶತಕ ಸೇರಿದಂತೆ 31.61 ಸರಾಸರಿಯಲ್ಲಿ 411 ರನ್ ಪೇರಿಸಿದರು. ಬಳಿಕ ಆರ್ಸಿಬಿ ಅವರನ್ನು ತಂಡದಿಂದ ಕೈಬಿಟ್ಟಿತ್ತು. 2022ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದರು. 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ.