ಬೆಳಗಾವಿ: ರೈತ ಬದುಕಿದ್ದಾಗಲೇ ಸತ್ತಿರುವುದಾಗಿ ದಾಖಲೆ ಸೃಷ್ಟಿಸಿ, ದೃಢೀಕರಿಸಿದ ಆರೋಪದ ಮೇಲೆ ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮ ಲೆಕ್ಕಾಧಿಕಾರಿ ನೀಲಾ ಮುರಗೋಡ ಅವರನ್ನು ಅಮಾನತುಗೊಳಿಸಿ, ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪುತ್ರ ಬಸವರಾಜ ಈರಪ್ಪ ಅಬ್ಬಾಯಿ ಅವರು ನಿಧನರಾದಾಗ, ಅವರ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಪಡೆಯಲು ಅವರ ತಂದೆ ಈರಪ್ಪ ನಾಗಪ್ಪ ಅಬ್ಬಾಯಿ ಅರ್ಜಿ ಸಲ್ಲಿಸಿದ್ದರು.
ಆದರೆ, ಅಧಿಕಾರಿಗಳು ಬಸವರಾಜ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಕೊಡುವುದರ ಜೊತೆಗೆ ಅವರ ತಂದೆ ಈರಪ್ಪ ಅವರೂ ಮೃತಪಟ್ಟಿದ್ದಾರೆಂದು ದಾಖಲೆ ಸೃಷ್ಟಿಸಿದ್ದರು.
‘ಈ ಪ್ರಕರಣದ ಬಗ್ಗೆ ಉಪ ಲೋಕಾಯುಕ್ತರು ನಾಲ್ವರು ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಎಲ್ಲ ಅಂಶಗಳನ್ನು ಪರಿಗಣಿಸಿ ನೀಲಾ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.




