ಬೆಂಗಳೂರು: ನಗರದಲ್ಲಿ ಆಗಾಗ್ಗೆ ವಿಚಿತ್ರವಾದ ಪ್ರಕರಣಗಳು ದಾಖಲಾಗುತ್ತಲೇ ಇವೆ, ಅದೂ ಸಹ ವಿದ್ಯಾವಂತರೇ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ದುರಂತದ ವಿಚಾರ. ಈ ನಡುವೆ ನಗರದಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. ‘ಫಸ್ಟ್ ನೈಟ್’ ನಿರಾಕರಣೆ ಮಾಡಿದ್ದಕ್ಕೆ ಪತಿ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಮದುವೆಯಾಗಿ ತಿಂಗಳಾದರೂ ಸಹ ‘ಫಸ್ಟ್ ನೈಟ್’ ನಡೆದಿಲ್ಲ ಎಂದು ದೂರಲಾಗಿದೆ. ಅಲ್ಲದೆ ಪತಿ ಮತ್ತು ಅತ್ತೆ ಮಾವರಿಂದ ಮಾನಸಿಕ, ದೈಹಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಘಟನೆ ಸಂಬಂಧ ಈಗ ಪೊಲೀಸರ ಮೊರೆಹೋಗಿದ್ದಾಳೆ ಮಹಿಳೆ. ಈ ಘಟನೆ ಸುಬ್ರಹ್ಮಣ್ಯಪುರದಲ್ಲಿ ಬೆಳಕಿಗೆ ಬಂದಿದ್ದು, ಮಹಿಳೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಕೆಯ ಹೇಳಿಕೆಯ ಪ್ರಕಾರ, ಆಕೆ ಅದೇ ಪ್ರದೇಶದ ಗುಬ್ಬಲಾಲ ನಿವಾಸಿ ರಾಘವೇಂದ್ರ ಅವರನ್ನು ವಿವಾಹ ಆಗಿದ್ದರು. ಆದರೆ, ಮದುವೆಯ ದಿನದಿಂದಲೂ ತನ್ನ ಪತಿ ಯಾವುದೇ ದೈಹಿಕ ಸಂಬಂಧವನ್ನು ತಪ್ಪಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ಸಾಮಾನ್ಯ ವೈವಾಹಿಕ ಜೀವನದ ನಿರೀಕ್ಷೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ, ತನ್ನ ಪತಿ ನಿರಂತರವಾಗಿ ದೂರ ಉಳಿದು ‘ಮೊದಲ ರಾತ್ರಿ’ಗೆ ಒಪ್ಪಲಿಲ್ಲ, ಇದು ತನಗೆ ತೀವ್ರ ಮಾನಸಿಕ ಯಾತನೆಯನ್ನುಂಟುಮಾಡಿತು ಎಂದು ಮಹಿಳೆ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ನಡವಳಿಕೆಯನ್ನು ನಿರಂತರ ಮಾನಸಿಕ ಕಿರುಕುಳದ ಒಂದು ರೂಪ ಎಂದು ಅವರು ಹೇಳಿದ್ದಾರೆ.
ಮದುವೆಯ ಸಮಯದಲ್ಲಿ ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ನೀಡಲಾಗಿದ್ದರೂ ಸಹ ಪತಿ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಲೇ ಇದ್ದರು ಎಂದು ದೂರುದಾರರು ತಮ್ಮ ಆರೋಪಗಳಿಗೆ ಮತ್ತಷ್ಟು ವಿಷಯಗಳನ್ನು ಸೇರಿಸಿದ್ದಾರೆ. ಕುಟುಂಬದ ಅನೇಕ ಸದಸ್ಯರು ತನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಆಕೆಯ ದೂರಿನ ಪ್ರಕಾರ, ಜೂನ್ 2024 ರಿಂದ ಡಿಸೆಂಬರ್ 2024 ರ ನಡುವೆ ಹಲವಾರು ತಿಂಗಳುಗಳ ಕಾಲ ಕಿರುಕುಳ ನಡೆಸಲಾಗಿದೆಯಂತೆ. ಈ ಅವಧಿಯಲ್ಲಿ, ಆಕೆಯ ಪತಿ ಆಕೆಯನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗಿದ್ದಲ್ಲದೆ, ಆಕೆಯೊಂದಿಗೆ ಸಂವಹನ ನಡೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾಗಿ ಆರೋಪಿಸಲಾಗಿದೆ. ಆತ ತನ್ನೊಂದಿಗೆ ಮಾತನಾಡಲಿಲ್ಲ ಅಥವಾ ಯಾವುದೇ ರೀತಿಯ ವೈವಾಹಿಕ ಸಂಬಂಧವನ್ನು ಉಳಿಸಿಕೊಳ್ಳಲಿಲ್ಲ ಎಂದಿದ್ದಾರೆ.
ಇದು ನಿರಂತರವಾದಾಗ ಮಹಿಳೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ, ಸುಬ್ರಹ್ಮಣ್ಯಪುರ ಪೊಲೀಸರು ಆಕೆಯ ಪತಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ವರದಕ್ಷಿಣೆ ನಿಷೇಧ ಕಾಯ್ದೆಯ ನಿಬಂಧನೆಗಳ ಜೊತೆಗೆ ಬಿಎನ್ಎಸ್ ಸೆಕ್ಷನ್ 85 (ಪತಿ ಅಥವಾ ಸಂಬಂಧಿಕರಿಂದ ಕ್ರೌರ್ಯ), ಬಿಎನ್ಎಸ್ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ಮೇಲೆ 93 ಲಕ್ಷ ಸಾಲದ ಹೊರೆ
ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ 41 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹೆಸರಲ್ಲಿ ಅವಳಿಗೆ ತಿಳಿಯದಂತೆ ಸಾಲಗಳನ್ನು ಪಡೆದು, ₹93 ಲಕ್ಷ ಸಾಲದ ಹೊರೆಯನ್ನು ಹೊರಿಸಿದ್ದಾನೆ. ಘಟನೆ ಸಂಬಂಧ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಕ್ಕೂರು ನಿವಾಸಿ ಶಬರೀಶ್ ಕುಮಾರ್ ಸಿ ಎಂದು ಗುರುತಿಸಲಾದ ಆರೋಪಿಯು 2016 ರಲ್ಲಿ ವಿವಾಹವಾದ ನಂತರ ಹಲವಾರು ವರ್ಷಗಳಿಂದ ತನ್ನ ಪತ್ನಿಯನ್ನು ಆರ್ಥಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಆರ್ಎಂವಿ 2 ನೇ ಹಂತದಲ್ಲಿ ವಾಸಿಸುವ 37 ವರ್ಷದ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ದೂರುದಾರರು, ಕುಮಾರ್ ವ್ಯವಸ್ಥಿತವಾಗಿ ಬ್ಯಾಂಕ್ಗಳು ಮತ್ತು ಖಾಸಗಿ ಸಾಲದಾತರಿಂದ ಹಣವನ್ನು ಪಡೆಯಲು ತನ್ನ ಗುರುತನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಕುಮಾರ್ ತನ್ನ ಪತ್ನಿಯ ಮೊಬೈಲ್ ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸಾಲದ ಅರ್ಜಿಗಳನ್ನು ಡೌನ್ಲೋಡ್ ಮಾಡಲು ಬಳಸುತ್ತಿದ್ದ, ಆಕೆಯ ಒಪ್ಪಿಗೆ ಅಥವಾ ಅರಿವಿಲ್ಲದೆ ಹಣವನ್ನು ಪಡೆದಿದ್ದ ಎಂದು ಆರೋಪಿಸಲಾಗಿದೆ.
ಆರೋಪಿಯು ಷೇರು ವ್ಯಾಪಾರದ ಚಟವನ್ನು ಬೆಳೆಸಿಕೊಂಡಿದ್ದ ಎಂದು ನಂಬಲಾಗಿದೆ, ಇದು ಪದೇ ಪದೇ ಸಾಲ ಪಡೆಯಲು ಕಾರಣವಾಗಿರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.




