ಅಥಣಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಮಂಜುನಾಥ ಮಾಂಗ ಅವರು ಶುಕ್ರವಾರ ಅನಾರೋಗ್ಯದಿಂದ ನಿಧನರಾದರು. ಮಂಜುನಾಥ ಅವರ ಪತ್ನಿ ರೇಣುಕಾ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದವರು. ದಾಂಪತ್ಯ ಜೀವನದಲ್ಲಿ ಕೆಲವು ದಿನಗಳಿಂದ ಮನಸ್ತಾಪ ಉಂಟಾಗಿದ್ದ ಕಾರಣ ರೇಣುಕಾ ಅವರು ಕಳೆದ ಮೂರು ವರ್ಷಗಳಿಂದ ತವರು ಊರಾದ ಐಗಳಿಯಲ್ಲಿ ತಮ್ಮ ತಂದೆ ಮನೆಯಲ್ಲಿ ವಾಸಿಸುತ್ತಿದ್ದರು ಇವರಿಗೆ ಮೂರು ವರ್ಷದ ಹೆಣ್ಣು ಮಗು ಇದೆ.
ಸುಮಾರು ಇಪ್ಪತ್ತು ದಿನಗಳ ಹಿಂದೆ ಮಂಜುನಾಥ ಮಿರಜದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸುದ್ದಿ ತಿಳಿದು ರೇಣುಕಾ ಮತ್ತು ಮಗಳು ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಬಂದಿದ್ದರು ಆಗ ರೇಣುಕಾ ಅವರು ಗುಣವಾದ ನಂತರ ಮನೆಗೆ ಬನ್ನಿ ನಾನೂ ಬರುತ್ತೇನೆ ನಾವು ಚೆನ್ನಾಗಿ ಇರೋಣ ಎಂದು ಹೇಳಿಕೊಂಡು ಹಿಂತಿರುಗಿದ್ದರು.

ಆದರೆ ನಿನ್ನೆ ಮಂಜುನಾಥ ಅವರು ನಿಧನರಾದರು. ಈ ಮಾಹಿತಿ ತಿಳಿದು ರೇಣುಕಾ ಮತ್ತು ಅವರ ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ತುಂಗಳ ಗ್ರಾಮಕ್ಕೆ ತೆರಳಿದರು ಇದೇ ವೇಳೆ ಅಲ್ಲಿನ ಮಂಜುನಾಥನ ಕುಟುಂಬಸ್ಥರು ರೇಣುಕಾ ಮತ್ತು ಅವರ ಮನೆಯವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಈ ಸಂಬಂಧ ಸಾವಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಹಲ್ಲೆಗೆ ಒಳಗಾದವರು ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಾವು ಆಕಸ್ಮಿಕವಾಗಿ ನಡೆದಂತೆ ನಮಗೆ ತೋರುವುದಿಲ್ಲ ಪ್ರಕರಣದಲ್ಲಿ ಕೆಲವು ಅನುಮಾನಾಸ್ಪದ ಅಂಶಗಳು ಕಂಡುಬಂದಿರುವುದರಿಂದ, ಇದು ಪೂರ್ವನಿಯೋಜಿತವಾಗಿ ನಡೆದಿರಬಹುದೆಂಬ ಶಂಕೆ ಇದೆ. ಪೊಲೀಸ್ ಇಲಾಖೆ ಸಂಪೂರ್ಣ ತನಿಖೆ ನಡೆಸಿ ಸತ್ಯ ಹೊರತರುವುದು ಅಗತ್ಯ.ಅಪ್ಪಸಾಬ ಹ ಮಾದರ,ರೇಣುಕಾಳ ಅಣ್ಣ
“ನಿಧನದ ಸುದ್ದಿ ತಿಳಿದ ತಕ್ಷಣ ನಾವು ಮತ್ತು ರೇಣುಕಾ ಅವರ ಕುಟುಂಬಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಇಲ್ಲಿ ಬಂದಿದ್ದೇವೆ. ಆದರೆ ಅನಿರೀಕ್ಷಿತವಾಗಿ ಇಲ್ಲಿನ ಕೆಲವರು ಏಕಾಏಕಿ ನಮ್ಮ ಕಡೆ ದಾಳಿ ಮಾಡಿ ನಮ್ಮವರ ಮೇಲೆ ಹಲ್ಲೆ ನಡೆಸಿದರು. ನಾನು ಎಷ್ಟೇ ಬೇಡಿಕೊಂಡರೂ ಕೇಳದೇ, ಮನಬಂದಂತೆ ಹೊಡೆದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನೀತಾ ಅಪ್ಪು ಮಾದರ ಘಟನೆ ಸಾಕ್ಷಿದಾರರು”




