ಬೆಂಗಳೂರು: ನಗದು, ಚಿನ್ನಾಭರಣ ಕಳವಾದ ಬಗ್ಗೆ ಆಗಾಗ್ಗೆ ವರದಿಗಳಾಗುತ್ತಿರುತ್ತವೆ. ದೇವಸ್ಥಾನ ಹುಂಡಿಗೂ ಕನ್ನ ಹಾಕುವುದನ್ನು ಕೇಳಿರುತ್ತೇವೆ. ಆದರೆ ಈಗ ಬೆಂಗಳೂರಿನಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರೊಂದಿಗೆ, ಬೆಂಗಳೂರಲ್ಲಿ ಏನು ಸಿಕ್ಕಿದರೂ ಕಳ್ಳರು ಬಿಡುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ.
ಬೈಕ್ ಆಯ್ತು, ಚಪ್ಪಲಿ ಆಯ್ತು, ದೇವಸ್ಥಾನ ಹುಂಡಿಯೂ ಆಯ್ತು, ಇದೀಗ ಖತರ್ನಾಕ್ ಕಳ್ಳರು ತಲೆಗೂದಲನ್ನೂ ಕದ್ದೊಯ್ದಿದ್ದಾರೆ! ಹೌದು, ಬರೋಬ್ಬರಿ 27 ಮೂಟೆ ಕೂದಲು ಕಳವಾಗಿದೆ. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಖದೀಮರ ಕುಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದಲ್ಲ, ಎರಡಲ್ಲ ಮೂಟೆಗಟ್ಟಲೇ ಕೂದಲನ್ನು ಕಳ್ಳರು ಕದೊಯ್ದಿದ್ದಾರೆ. ಸೋಲದೇವನಹಳ್ಳಿ ಬಳಿಯ ಲಕ್ಷ್ಮೀ ಪುರ ಕ್ರಾಸ್ನಲ್ಲಿರುವ ಗೋಡೌನ್ನಲ್ಲಿ ಕೂದಲನ್ನು ಸಂಗ್ರಹಿಸಿಡಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಕೂದಲಿನ ಮೂಟೆಗಳನ್ನು ಎರಡು ದಿನಗಳ ಹಿಂದೆ ಕಳ್ಳತನ ಮಾಡಲಾಗಿದೆ.
ಈ ಸಂಬಂದ ಗೋಡೌನ್ ಮಾಲೀಕ ವೆಂಕಟರಮಣ ಎಂಬವರು ದೂರು ನೀಡಿದ್ದಾರೆ. ಆರು ಜನ ಖದೀಮರು ವಾಹನದಲ್ಲಿ ಬಂದು ಕೂದಲು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಮಾಲೀಕ ವೆಂಕಟರಮಣ ಅವರು ಚೀನಾ, ಬರ್ಮಾ, ಹಾಂಕಾಂಗ್ಗೆ ಕೂದಲು ರಫ್ತು ಮಾಡುವ ಉದ್ಯಮ ಹೊಂದಿದ್ದಾರೆ. ಕಳೆದ ವಾರ ಚೀನಾದ ವ್ಯಕ್ತಿಗಳು ಬಂದು ವಿಗ್ ತಯಾರಿಕೆಗೆ ಕೂದಲು ಕಳುಹಿಸುವಂತೆ ಮಾತುಕತೆ ನಡೆಸಿದ್ದರು. ಅವರಿಗೆ ಕಳುಹಿಸಿಕೊಡುವುದಕ್ಕಾಗಿ ಕೂದಲನ್ನು ಮೂಟೆ ಕಟ್ಟಿ ಇಡಲಾಗಿತ್ತು. ಇನ್ನೇನು ಎರಡು ದಿನಗಳಲ್ಲಿ ಕೂದಲು ರಫ್ತು ಆಗಬೇಕು ಎನ್ನುವಷ್ಟರಲ್ಲಿ ತಲೆಗೂದಲು ಕಳ್ಳರ ಪಾಲಾಗಿದೆ. 27 ಮೂಟೆಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. CCTVದೃಶ್ಯ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ವೈಟ್ ಅಂಡ್ ಬ್ಲಾಕ್ ದಂಧೆ ಮೂಲಕ ಕೋಟ್ಯಂತರ ರೂಪಾಯಿ ರೋಡೆ ಮಾಡಿದ್ದ ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬುಧವಾರವಷ್ಟೇ ಬಂಧಿಸಿದ್ದರು. ಇದೀಗ ಅದರ ಬೆನ್ನಲ್ಲೇ, ಕೂದಲನ್ನೆ ಕಳವು ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮನೆಯ ಹೊರಗಡೆ ಇಟ್ಟಿರುವ ಚಪ್ಪಲಿ ಕಳ್ಳತನ, ದೇಗುಲಗಳ ಹುಂಡಿಯಿಂದ ಕಳವು ಮಾಡುವುದು ಇತ್ಯಾದಿ ಪ್ರಕರಣಗಳು ಕೂಡ ಬೆಂಗಳೂರಿನಲ್ಲಿ ಹೆಚ್ಚಾಗಿವೆ.




