ಚೇಳೂರು : ತಾಲೂಕಿನ ಪಟ್ಟಣ ಪ್ರದೇಶಗಳಲ್ಲಿ ರಸ್ತೆಗಳು ಹಾಗೂ ಫುಟ್ಪಾತ್ ಅತಿಕ್ರಮಣದಿಂದಾಗಿ ಪಾದಚಾರಿಗಳು ಸುರಕ್ಷಿತವಾಗಿ ಸಂಚಾರ ಮಾಡುವುದು ದುಸ್ತರವಾಗಿದೆ.
ರಸ್ತೆಯ ಪಕ್ಕದಲ್ಲಿನ ಎರಡು ಬದಿಯಲ್ಲಿ ಬೇಕರಿ, ಜ್ಯುವೆಲ್ಲರಿ,ಹೋಟೆಲ್,ಹಾಗೂ ಬಾರ್ ಮಳಿಗೆಗಳ ಮಾಲೀಕರು ತಮ್ಮ ಅಂಗಡಿಯ ಜಾಹೀರಾತು ಫಲಕ ಸೇರಿದಂತೆ ಸಾಮಗ್ರಿಗಳನ್ನು ಇಟ್ಟು ಗ್ರಾಹಕರನ್ನು ಆಕರ್ಷಿಸುತ್ತಿರುವ ಕಾರಣ ಫುಟ್ಪಾತ್ ಸೇರಿದಂತೆ ರಸ್ತೆ ಒತ್ತುವರಿ ಜೊತೆಗೆ ಅತಿಕ್ರಮಣವಾಗುತ್ತಿರುವುದು ಸಾಮಾನ್ಯವಾಗಿದೆ.
ತಾಲ್ಲೂಕು ಕೇಂದ್ರವಾಗಿರುವ ಚೇಳೂರು ಮುಖ್ಯ ರಸ್ತೆಯಲ್ಲಿ ಪಾದಚಾರಿಗಳಿಗೆಂದು ಈವರೆಗೂ ಮಾರ್ಗವನ್ನು ಗುರುತಿಸಿಲ್ಲ. ಇದ್ದ ಒಂದು ಮುಖ್ಯ ರಸ್ತೆಯನ್ನು ಇಬ್ಬಾಗ ಮಾಡಿ ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಲಾಯಿತು. ಆದರೆ ದ್ವಿಮುಖ ರಸ್ತೆ ಮಾಡಿದ ನಂತರ ಪಾದಚಾರಿಗಳು ಸಂಚರಿಸಲು ಪ್ರತ್ಯೇಕ ಫುಟ್ ಪಾತ್ ಇಲ್ಲದೇ ನಿತ್ಯ ಭಯದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಂಚಿನಲ್ಲಿ ಅಂಗಡಿ ಮುಂಗಟ್ಟುಗಳು ರಸ್ತೆಗೆ ಬಾಗಿಕೊಂಡಿರುವುದರಿಂದ ಪಾದಚಾರಿಗಳು ಓಡಾಡಲು ಹರಸಾಹಸ ಪಡಬೇಕಾಗಿದೆ. ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯಂಚಿನಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಓಡಾಡಲು ತೊಂದರೆಯಾಗಿದೆ.
ಅದರಲ್ಲೂ ಬಾಗೇಪಲ್ಲಿ ಸಂಪರ್ಕಿಸುವ ರಸ್ತೆ ಉದ್ದಕ್ಕೂ ಹಾಗೂ ಚಿಂತಾಮಣಿ ಸಂಪರ್ಕಿಸುವ ರಸ್ತೆಯ ಎರಡು ಬದಿಯಲ್ಲಿ ಇರುವ ರಸ್ತೆಗಳಲ್ಲಿ ಪ್ರಮುಖ ಜ್ಯುವೆಲ್ಲರಿ ಶಾಪ್, ಬಾರ್, ಹೋಟೆಲ್ಗಳ ಮಾಲೀಕರು,ಸೈಬರ್ ಅಂಗಡಿಯ ಮಾಲೀಕರು,ಬೇಕರಿ ಅಂಗಡಿಯವರು ಹಾಗೂ ಎಂಜಿ ವೃತ್ತದಲ್ಲಿ ಇರುವ ನಾಗೇಂದ್ರ ಟ್ರೇಡರ್ಸ್ ಎಂಬ ಅಂಗಡಿಯಿಂದ ಅಂಗಡಿಯ ಮುಂಬಾಗ ದಿನ ನಿತ್ಯ ಜನ ದಟ್ಟಣೆಯಿಂದ ಕೂಡಿದ್ದಲ್ಲದೆ ಫುಟ್ಪಾತ್ ಗಳನ್ನು ಅತಿಕ್ರಮಣ ಮಾಡಿಕೊಂಡು ಅಂಗಡಿಯ ಜಾಹೀರಾತು ಫಲಕಗಳನ್ನು ಅಳವಡಿಸಲಾಗಿದೆ,ಹಾಗೂ ವ್ಯಾಪಾರಕ್ಕೆ ಎಂದು ಬರುವ ಗ್ರಾಹಕರ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ.
ಅಲ್ಲದೆ ಕೆಲವು ದ್ವಿಚಕ್ರ ವಾಹನ ಶೋರೂಂ ಅಂಗಡಿಯವರು ರಸ್ತೆ ಪಕ್ಕದ ಪಾದಚಾರಿ ರಸ್ತೆಯ ಮೇಲೆ ವಾಹನಗಳನ್ನು ನಿಲ್ಲಿಸಿ ಅಂಗಡಿಗಳ ವಸ್ತುಗಳನ್ನು ,ಹಾಗೂ ತಳ್ಳುವ ಗಾಡಿಯಲ್ಲಿ ಎಗ್ ರೈಸ್ ಗೂಡಂಗಡಿಗಳನ್ನು ಹಾಕಿಕೊಂಡಿದ್ದು, ಇದನ್ನು ತೆರವು ಮಾಡಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಇದುವರೆಗೂ ಗ್ರಾಮ ಪಂಚಾಯತಿ ಆಗಲಿ ಅಥವಾ ಪೊಲೀಸ್ ಇಲಾಖೆಯಿಂದಾಗಲಿ ಗಂಭೀರವಾದ ಕ್ರಮವನ್ನು ಕೈಗೊಂಡಿಲ್ಲ ಎನ್ನುವುದು ನಾಗರಿಕರ ದೂರು.
ಇದರಿಂದಾಗಿ ವಾಹನಗಳಿರಲಿ, ಜನರ ಓಡಾಟಕ್ಕೂ ಸಮಸ್ಯೆ ಆಗಿದ್ದು, ಈ ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಜಾಹೀರಾತು ಫಲಕ ಹಾಗೂ ಪುಟ್ ಪಾತ್ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕೆಂದು ನಾಗರಿಕರ ಒತ್ತಾಯ.
ಚೇಳೂರು ಮುಖ್ಯ ರಸ್ತೆಯಲ್ಲಿ ಹಲವು ಕಡೆ ಪಾದಚಾರಿಗಳ ಮಾರ್ಗದಲ್ಲಿ ರಸ್ತೆ ಬದಿ ವ್ಯಾಪಾರ ಮಾಡಲಾಗುತ್ತಿದೆ. ವಾಣಿಜ್ಯ ಮಳಿಗೆಯವರು ರಸ್ತೆಯಲ್ಲಿ ನಾಮಫಲಕದ ಇಡುತ್ತಿರುವುದರಿಂದ ವಾಹನಗಳ ನಿಲುಗಡೆಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗಿದೆ. ಅಪಘಾತಕ್ಕೂ ಎಡೆಮಾಡಿಕೊಟ್ಟಿದೆ. – ಜಿ.ನರಸಿಂಹ (ಕ.ದ.ಸಂ.ಸ.ತಾಲೂಕು ಸಂಚಾಲಕರು)
ಪಟ್ಟಣದಲ್ಲಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಹಿತದೃಷ್ಟಿಯಿಂದ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲಾಗುವುದು,ಹಾಗೂ ಮುಂದಿನ ದಿನಗಳಲ್ಲಿ ಅವುಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು. – ಕೆ ವೆಂಕಟಾಚಲಪತಿ(ಗ್ರಾಂ.ಪ.ಪಿಡಿಒ ಚೇಳೂರು)
ವರದಿ :ಯಾರಬ್. ಎಂ.