ತುರುವೇಕೆರೆ : ತಾಲ್ಲೂಕಿನ ಅಂಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಕೊಠಡಿಯ ಬೀಗ ಮುರಿದು ಎರಡು ಸಿಲಿಂಡರ್ ಹಾಗೂ ಇತರೆ ಬಿಸಿಯೂಟದ ದಿನಸಿ ಪದಾರ್ಥಗಳನ್ನು ಕಳವು ಮಾಡಿದ್ದ ಕಳ್ಳರನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಅಂಚಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2026 ರ ಜನವರಿ 05 ರಂದು ಅಕ್ಷರ ದಾಸೋಹ ಕೊಠಡಿಯ ಬೀಗ ಮುರಿದು ಎರಡು ಸಿಲಿಂಡರ್ ಹಾಗೂ ಇತರೆ ಬಿಸಿಯೂಟದ ದಿನಸಿ ಪದಾರ್ಥಗಳನ್ನು ಕಳವು ಮಾಡಿದ್ದಾರೆ ಎಂದು ಶಾಲೆಯ ಮುಖ್ಯಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತುಮಕೂರು ಪೊಲೀಸ್ ಅಧೀಕ್ಷಕ ಅಶೋಕ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ್, ಪುರುಷೋತ್ತಮ್ ನೇತೃತ್ವದಲ್ಲಿ ಕುಣಿಗಲ್ ಉಪವಿಭಾಗದ ಉಪಾಧೀಕ್ಷಕ ಓಂಪ್ರಕಾಶ್ ಸೂಚನೆ ಮೇರೆಗೆ ತುರುವೇಕೆರೆ ಸಿಪಿಐ ಲೋಹಿತ್, ಪಿಎಸ್ಐ ಮೂರ್ತಿ, ಸಿಬ್ಬಂದಿಗಳಾದ ರಾಜ್ ಕುಮಾರ್ ವಗ್ಗೇರಿ, ಕುಮಾರ್ ಅವರನ್ನೊಳಗೊಂಡ ಅಪರಾಧ ಪತ್ತೆ ಹಚ್ಚಲು ಆರೋಪಿಗಳನ್ನು ಬಂಧಿಸಲು ತಂಡ ರಚಿಸಿದ್ದರು.
ಈ ತಂಡ ಶಾಲೆಯ ಮುಖ್ಯಸ್ಥರ ದೂರಿನ ಮೇರೆಗೆ ಶಾಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆ ಕಾರ್ಯ ಪ್ರಾರಂಭಿಸಿತ್ತು. ಅದರಂತೆ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಶಾಲೆಯಲ್ಲಿ ಕಳ್ಳತನ ಮಾಡಿದ ಮೂವರೂ ಆರೋಪಿಗಳು ತುರುವೇಕೆರೆ ತಾಲ್ಲೂಕಿನವರೇ ಆಗಿದ್ದಾರೆ. ದಬ್ಬೇಘಟ್ಟ ಹೋಬಳಿಯ ಮಾವಿನಕೆರೆ ಗ್ರಾಮದ ಗಂಗಾಧರ್ (22 ವರ್ಷ), ಮಾಯಸಂದ್ರದ ಅಫ್ಜಲ್ ಪಾಷ (38 ವರ್ಷ), ಶಮಿಲ್ ಪಾಷ (25 ವರ್ಷ) ಆರೋಪಿಗಳಾಗಿದ್ದು, ಇವರಿಂದ ಕಳವಾಗಿದ್ದ ಮಾಲನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಮಾಲು ಸಮೇತ ಬಂಧಿಸಿದ ಅಪರಾಧ ಪತ್ತೆ ತಂಡವನ್ನು ಅಧೀಕ್ಷಕ ಅಶೋಕ್ ಅಭಿನಂದಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್




