ಸೇಡಂ: ತಾಲೂಕಿನ ಮಾದನ ಗ್ರಾಮದಲ್ಲಿ ರಾಜಶೇಖರ್ ಎಂಬ ವ್ಯಕ್ತಿ ಕೇವಲ 10ನೇ ತರಗತಿ ಪಾಸ್ ಆಗಿದ್ದರೂ ಸಹ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಕುರಿತು ದಿನಾಂಕ 31/01/2026 ರಂದು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಲಾಗಿದೆ.
ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗಲೇ ಮನವಿ ಮಾಡಲಾಗಿದ್ದು, ಈ ವಿಷಯವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಾದ ಡಿಡಿ ಅವರ ಗಮನಕ್ಕೂ ತರಲಾಗಿದೆ.
ಆದರೆ ಸಂಬಂಧಪಟ್ಟ ಅಧಿಕಾರಿಗಳು “ಕಾನೂನು ಕ್ರಮ ತೆಗೆದುಕೊಂಡಿದ್ದೇವೆ” ಎಂದು ಹೇಳಿದ್ದರು, ಆದರೆ ನಾವು ಸ್ಥಳ ಪರಿಶೀಲನೆ ಮಾಡಿದಾಗ ಇದುವರೆಗೂ ಯಾವುದೇ ರೀತಿಯ ಕಾನೂನು ಕ್ರಮ ತೆಗೆದುಕೊಂಡಿರುವುದು ಅಥವಾ ಅಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರಿಂದ ಅಧಿಕಾರಿಗಳು ಸಾರ್ವಜನಿಕರ ಪರವಾಗಿ ನಿಲ್ಲದೆ, ಕಾನೂನು ಉಲ್ಲಂಘನೆ ಮಾಡಿದವರ ಪರವಾಗಿ ನಿಂತು ಅವರಿಗೆ ಬೆಂಬಲ ನೀಡುತ್ತಿರುವಂತಹ ಪರಿಸ್ಥಿತಿ ಕಾಣುತ್ತಿದೆ.
ಇಂತಹ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ತಕ್ಷಣ ತನಿಖೆ ನಡೆಸಿ ಅವರನ್ನು ಅಮಾನತು ಮಾಡಬೇಕು ಎಂದು ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಅಧ್ಯಕ್ಷ ನರೇಶ್ ಏ ನಾಟಿಕರ್ ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳು ನಿಜವಾಗಿಯೂ ಕಾನೂನು ಕ್ರಮ ತೆಗೆದುಕೊಂಡಿದ್ದರೆ, ಅದರ ಕುರಿತು ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ತಿಳಿಸಬೇಕಿತ್ತು.
ಅದೇ ರೀತಿ, ಅನಧಿಕೃತ ಕ್ಲಿನಿಕ್ಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಕೂಡ ಆರೋಗ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಜನರು ಅರ್ಹತೆ ಹೊಂದಿದ ವೈದ್ಯರ ಬಳಿ ಮಾತ್ರ ಚಿಕಿತ್ಸೆ ಪಡೆಯಬೇಕು ಎಂಬ ಕುರಿತು ಅಧಿಕಾರಿಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಇದೇ ರೀತಿಯಲ್ಲಿ ಈಗ ಅರ್ಹತೆ ಇಲ್ಲದ ಖಾಸಗಿ ಕ್ಲಿನಿಕ್ ಚಿಕಿತ್ಸೆ ನೀಡಿರುವ ರಾಜಶೇಖರ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಒಂದು ವೇಳೆ ಇದೆ ರೀತಿ ನಿರ್ಲಕ್ಷ್ಯ ಮುಂದುವರಿದರೆ, ಅಂಬೇಡ್ಕರ್ ಯುವ ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಚ್ಚರಿಕೆ ನೀಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




