ಬೆಳಗಾವಿ : ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಷ್ಟೇ ಕ್ರಮ ಕೈಗೊಂಡಿದ್ದರೂ ರಾಜ್ಯದಲ್ಲಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮಾತ್ರ ನಿಂತಿಲ್ಲ. ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದಾಗಿ ಮೂರು ತಿಂಗಳ ಹಸುಗೂಸಿನೊಂದಿಗೆ ಕುಟುಂಬ ಸಮೇತ ಬೀದಿಗೆ ಬಿದ್ದಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಖಾಸಗಿ ಫೈನಾನ್ಸ್ ಕಂಪನಿಯ ಕಿರುಕುಳದಿಂದ ಪುಟ್ಟ ಮಗುವಿನೊಂದಿಗೆ ಕುಟುಂಬ ಬೀದಿಗೆ ಬಿದ್ದಿದೆ.
ಹನುಮಂತ ಪಾಟೀಲ್ ಎಂಬುವವರು ಚಿಕ್ಕೋಡಿಯ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದರು. ಈಗ ಕಂಪನಿ ಸಿಬ್ಬಂದಿ ಮನೆ ಸೀಜ್ ಮಾಡಿ ಹೋಗಿದ್ದಾರೆ.
ಮೂರು ತಿಂಗಳ ಹಸುಗೂಸು ಸೇರಿ ಐವರು ಕುಟುಂಬಸ್ಥರನ್ನು ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಹಾಕಲಾಗಿದೆ. ಕಂದಮ್ಮನನ್ನು ಕೈಯಲ್ಲಿ ಹಿಡಿದು ಕುಟುಂಬ ಸದಸ್ಯರು ಮನೆ ಹೊರಗೆ ಊಟ, ನಿದ್ರೆಯಿಲ್ಲದೆ ರಾತ್ರಿ ಕಳೆದಿದ್ದಾರೆ.
ಹನುಮಂತ ಪಾಟೀಲ್ ಎಂಬುವವರು ತಂದೆ ಶ್ರೀಕಾಂತ್ ಪಾಟೀಲ್ ಹೃದಯ ಶಸ್ತ್ರಚಿಕಿತ್ಸೆಗಾಗಿ ಮನೆ ಅಡವಿಟ್ಟು ಸುಮಾರು 20 ಲಕ್ಷ ರೂ. ಸಾಲ ಪಡೆದಿದ್ದರಂತೆ. ಕಳೆದ ವರ್ಷ ಶ್ರೀಕಾಂತ್ ನಿಧನರಾದ ಬಳಿಕ, ಆರೋಗ್ಯ ಸಮಸ್ಯೆಯಿಂದಾಗಿ ಹನುಮಂತ ಕಳೆದ ಏಳು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ. ಸುಮಾರು ಏಳು ಲಕ್ಷ ರೂ. ಬಾಕಿ ಇದ್ದ ಹಿನ್ನೆಲೆಯಲ್ಲಿ ಏಕಾಏಕಿ ಬಂದ ಪೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಸೀಜ್ ಮಾಡಿದ್ದಾರೆ.
ನುಮಂತ ದಂಪತಿಗೆ ಮೂರು ತಿಂಗಳ ಮಗುವಿದೆ. ಬಾಣಂತಿ-ಮಗು ಸೇರಿ ಒಟ್ಟೂ ಐವರು ಕುಟುಂಬಸ್ಥರು ರಾತ್ರಿಯಿಡೀ ಬೀದಿಯಲ್ಲಿ ಕಾಲ ಕಳೆದಿದ್ದಾರೆ.
ಮನೆಯಲ್ಲಿ ಇನ್ನೋರ್ವ 5 ತಿಂಗಳ ಬಾಣಂತಿ-ಮಗು ಇದ್ದು, ರಾತ್ರಿ ಊಟವಿಲ್ಲದೆ, ಚಳಿಯಿಂದ ಬಳಲಿದ ಕಾರಣ ಮಗು ಅನಾರೋಗ್ಯಕ್ಕೀಡಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹನುಮಂತ ಪಾಟೀಲರ ಪತ್ನಿ ಶ್ರೀದೇವಿ ತಿಳಿಸಿದ್ದಾರೆ.
ಫೈನಾನ್ಸ್ ನವರು ಬಂದು ಏಕಾಏಕಿ ಮನೆ ಸೀಜ್ ಮಾಡಿದ್ದಾರೆ. ಬಟ್ಟೆ, ಹಾಸಿಗೆ, ಪಾತ್ರೆ ಸೇರಿ ಮನೆಯೊಳಗಿನ ಯಾವ ವಸ್ತುವನ್ನೂ ತೆಗೆದುಕೊಳ್ಳಲು ಬಿಟ್ಟಿಲ್ಲ. ಮಕ್ಕಳನ್ನು ಕೈಯಲ್ಲಿ ಎತ್ತಿಕೊಂಡು ಎಲ್ಲಿಗೆ ಹೋಗುವುದು? ಎಂದು ಕಣ್ಣೀರಿಟ್ಟಿದ್ದಾರೆ.




