ಬೆಂಗಳೂರು : ಶಾಸಕರನ್ನು ನಿರ್ಲಕ್ಷಿಸಿ ಗ್ಯಾರಂಟಿ ಅನುಷ್ಠಾನ ಸಮಿತಿ ಮಾಡಿರುವುದು ಸರಿಯಲ್ಲ. ಶಾಸಕರ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ ವಿಷಯ ಕುರಿತು ಮಾತನಾಡಿದ ಅವರು, ಈ ಸಮಿತಿ ಕಾನೂನು ಬಾಹಿರ. ಇದನ್ನು ವಾಪಸ್ ಪಡೆದು ಶಾಸಕರ ಅಧ್ಯಕ್ಷತೆಯಲ್ಲೇ ಸಮಿತಿ ರಚಿಸಿ ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಮುಖ್ಯಮಂತ್ರಿ ಸುಪ್ರೀಂ, ಜಿಲ್ಲೆಗೆ ಜಿಲ್ಲಾ ಮಂತ್ರಿ ಸುಪ್ರೀಂ, ಸದನಕ್ಕೆ ಸಭಾಧ್ಯಕ್ಷರೇ ಸುಪ್ರೀಂ. ಹಾಗೆ ತಾಲ್ಲೂಕಿಗೆ ಶಾಸಕರೇ ಸುಪ್ರೀಂ. ಈ ವಿಚಾರದಲ್ಲಿ ರಾಜಕೀಯ ಬೇಡ. ಶಾಸಕರ ಹಕ್ಕುಗಳನ್ನು ಮೊಟಕುಗೊಳಿಸುವ ಪರ್ಯಾಯ ಸಮಿತಿಗಳ ರಚನೆ ಬೇಡ. ಈ ಸಮಿತಿಗಳನ್ನು ರದ್ದು ಮಾಡಿ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಸದಸ್ಯರನ್ನು ನೇಮಕ ಮಾಡಿಕೊಳ್ಳಿ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಾರ್ಯಕರ್ತರ ಅಧ್ಯಕ್ಷತೆಯ ಸಮಿತಿ ಮಾಡಿ ಅವರಿಗೆ ಸರ್ಕಾರದ ಬೊಕ್ಕಸದಿಂದ ಹಣ ಕೊಡುವುದನ್ನು ನಾವು ಒಪ್ಪಲ್ಲ. ಬೇಕಾದರೆ ನಿಮ್ಮ ಪಕ್ಷದ ಕಚೇರಿಯಿಂದ ಕೆಲಸ ಮಾಡಿ. ಈ ಸರ್ಕಾರ ಮನೆ ಹಾಳು ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಅಶೋಕ್ ಮಾತಿಗೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು: ಇದಕ್ಕೆ ಕಾಂಗ್ರೆಸ್ ಸದಸ್ಯ ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಸಂವಿಧಾನ ಪದವನ್ನು ಬಳಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅವಮಾನ ಮಾಡಲಾಗಿದೆ. ಪ್ರತಿಪಕ್ಷದ ನಾಯಕರು ಕ್ಷಮೆಕೇಳಬೇಕು ಎಂದು ಒತ್ತಾಯಿಸಿದರು.
ಮಾತು ಮುಂದುವರಿಸಿದ ಅಶೋಕ್, ಈ ಸಮಿತಿ ರಚನೆಯಿಂದ ಶಾಸಕರ ಹಕ್ಕುಗಳಿಗೆ ಚ್ಯುತಿಯಾಗಿದೆ. ನಾವು ನಮ್ಮ ಕೆಲಸ ಮಾಡಬೇಕಿದೆ. ನಾಮನಿರ್ದೇಶನ ಮಾಡಿದವರ ಗುಲಾಮರಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಕೂಡಲೇ ಸಮಿತಿಗಳನ್ನು ರದ್ದು ಮಾಡಿ, ಬೇಕಾದರೆ ನಿಮ್ಮ ಜಿಲ್ಲಾಧ್ಯಕ್ಷರಿಗೆ, ತಾಲ್ಲೂಕು ಅಧ್ಯಕ್ಷರಿಗೆ ಪಕ್ಷದಿಂದ ಸಂಬಳ ಕೊಟ್ಟಿಕೊಳ್ಳಿ. ಈ ಸಮಿತಿಗಳು ರದ್ದಾಗಲೇಬೇಕು. ಯಾರೂ ಅಧಿಕಾರದಲ್ಲಿ ಶಾಶ್ವತವಲ್ಲ, ಅರ್ಥ ಮಾಡಿಕೊಳ್ಳಿ ಎಂದರು.
ಸರ್ಕಾರದ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡಲು ಬರಲ್ಲ: ಇದಕ್ಕೂ ಮುನ್ನ ಈ ವಿಚಾರದಲ್ಲಿ ಶಾಸಕ ಕೃಷ್ಣಪ್ಪ ಮಾತನಾಡಿ, ಕಾನೂನು ಬಾಹಿರವಾಗಿ ಸರ್ಕಾರದ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಕೊಡಲು ಬರುವುದಿಲ್ಲ. ಶಾಸಕರನ್ನು ಕಡೆಗಣಿಸಿ ಕಾರ್ಯಕರ್ತರನ್ನು ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ. ಡಿಬಿಟಿ ಮೂಲಕ ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗುವಾಗ ಕಾರ್ಯಕರ್ತರಿಗೆ ಏನು ಕೆಲಸ?, ಪಕ್ಷದಿಂದ ಕೊಟ್ಟರೆ ನಮ ತಕರಾರಿಲ್ಲ ಎಂದರು.
ಬಿಜೆಪಿ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ರಾಜಕೀಯ ರಹಿತವಾಗಿ ಯೋಚನೆ ಮಾಡಬೇಕು. ಶಾಸಕರ ಎದುರುಗಡೆ ಕಾರ್ಯಕರ್ತರು ಸಭೆ ಮಾಡುತ್ತಾರೆ ಎಂದರೆ ಹೇಗೆ? ನಾವು ಜನರಿಂದ ಆಯ್ಕೆಯಾಗಿದ್ದೇವೆ. ಶಾಸಕರಿಂದ ಇನ್ನೊಂದು ಸಮಿತಿ ರಚನೆ ಮಾಡಿರುವುದು ಸರಿಯಲ್ಲ. ವಾರ್ಷಿಕ 15 ಕೋಟಿ ಹಂಚುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಗ್ಯಾರಂಟಿಗೆ ನಮ್ಮ ವಿರೋಧ ಇಲ್ಲ; ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ವಿ.ಸುನೀಲ್ಕುಮಾರ್ ಗ್ಯಾರಂಟಿ ಯೋಜನೆಗಳಿಗೆ ವಿರೋಧವಿಲ್ಲ, ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಶಾಸಕರ ಬದಲಾಗಿ ಕಾರ್ಯಕರ್ತರನ್ನು ನೇಮಕ ಮಾಡಿರುವುದಕ್ಕೆ ವಿರೋಧವಿದೆ ಎಂದರು.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಉಪಮುಖ್ಯಮಂತ್ರಿಗಳು ಗ್ಯಾರಂಟಿ ಗುಂಗಿನಿಂದ ಹೊರಬಂದಿಲ್ಲ. ದೆಹಲಿಯಲ್ಲಿ 25 ಗ್ಯಾರಂಟಿ ಕೊಟ್ಟ ಮನುಷ್ಯ ಈಗ ಜೀರೋ ಆಗಿದ್ದಾರೆ. ಐದಲ್ಲ, ಐವತ್ತು ಗ್ಯಾರಂಟಿ ಕೊಡಿ. ಆದರೆ, ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಗ್ಯಾರಂಟಿ ಯೋಜೆನೆಗೆ ಹಣ ಹೊಂದಾಣಿಕೆ ಕಷ್ಟ ಎಂದು ಹೇಳಿದ್ದಾರೆ ಎಂದಾಗ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.



