ತುರುವೇಕೆರೆ : ಮಾದಕ ವಸ್ತುವಿನ ಸೇವನೆಯಿಂದ ಬದುಕಿನ ಅಂತ್ಯ ಖಚಿತ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವಿಜಯಕುಮಾರ್ ತಿಳಿಸಿದರು.
ತುರುವೇಕೆರೆ ಪೊಲೀಸ್ ಠಾಣೆ ಹಾಗೂ ವಿವಿಧ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಶಾ ಮುಕ್ತ ಮಾಸಾಚರಣೆ, ನಶಾ ಮುಕ್ತ ತುರುವೇಕೆರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳಾದ ಧೂಮಪಾನ, ಮಧ್ಯಪಾನ, ಡ್ರಗ್ಸ್, ಚರಸ್, ಗಾಂಜಾ ಇವುಗಳ ಸೇವನೆ ಕ್ಷಣಿಕ ಸುಖವನ್ನು ನೀಡುತ್ತದೆ, ಆದರೆ ವ್ಯಕ್ತಿಯ ಅಂತ್ಯಕ್ಕೆ ಕಾರಣವಾಗುತ್ತದೆ. ಮಾದಕ ವಸ್ತುಗಳು ದೈಹಿಕ, ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ವ್ಯಕ್ತಿಯ ನರಮಂಡಲ ವ್ಯವಸ್ಥೆಯನ್ನು ಹದಗೆಡಿಸಿ ಮಾನಸಿಕ ಅಸ್ವಸ್ಥರನ್ನಾಗಿಸುತ್ತದೆ. ಅನಾರೋಗ್ಯ ಪೀಡಿತರನ್ನಾಗಿಸುತ್ತದೆ ಎಂದರು.
ದೃಶ್ಯ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಧೂಮಪಾನ, ಮಧ್ಯಪಾನದ ಜಾಹೀರಾತುಗಳಿಗೆ ಮನಸೋತು ಅದರ ಸೇವನೆಗೆ ಮುಂದಾದರೆ ನಿಮ್ಮ ಬದುಕನ್ನು ದುಶ್ಚಟಗಳು ಬಲಿತೆಗೆದುಕೊಳ್ಳುತ್ತದೆ. ಯಾವುದೇ ಮಾದಕ ವಸ್ತುಗಳು ಮನುಷ್ಯನನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದಿಲ್ಲ, ಅದರಿಂದ ಮನುಷ್ಯನಿಗೆ ಯಾವುದೇ ಪ್ರಯೋಜನವಿಲ್ಲ. ಮಾದಕ ವಸ್ತು ಸೇವಿಸಿದ ಯಾವುದೇ ವ್ಯಕ್ತಿಯನ್ನು ಸಮಾಜ ಗೌರವಿಸುವುದಿಲ್ಲ. ಮಾದಕ ವ್ಯಸನಿಯಿಂದ ಆತ ಹಾಳಾಗುವುದಲ್ಲದೆ ಆತನ ಕುಟುಂಬವನ್ನು ಬೀದಿಗೆ ಬರುವಂತೆ ಮಾಡುತ್ತಾನೆ ಹಾಗೂ ಸಮಾಜಕ್ಕೆ ಮಾರಕ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ. ದುಶ್ಚಟಗಳು ಕಾನೂನು ಬಾಹಿರ ಚಟುವಟಿಕೆಗೆ ಪ್ರೇರೇಪಿಸುತ್ತದೆ. ಮಾದಕ ವಸ್ತುಗಳ ಸೇವನೆಯಿಂದ ಉದ್ದಾರವಾಗಿರುವ ಒಂದೇ ಒಂದು ಉದಾಹರಣೆ ಜಗತ್ತಿನಲ್ಲಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ದುಶ್ಚಟಗಳು, ಮಾದಕ ವ್ಯಸನಗಳಿಂದ ದೂರವಿರಬೇಕು. ಮಾದಕ ವ್ಯಸನಗಳಿಗೆ ತುತ್ತಾಗಿರುವ ನಿಮ್ಮ ಕುಟುಂಬದ, ಪರಿಸರದ ವ್ಯಕ್ತಿಗಳಲ್ಲಿ ಅರಿವನ್ನು ಮೂಡಿಸಿ ಸ್ವಸ್ಥ, ಆರೋಗ್ಯವಂತ ಸಮಾಜದ ನಿರ್ಮಾತೃಗಳಾಗಬೇಕೆಂದರು.
ನಗರ ಪ್ರದೇಶಗಳಲ್ಲಿ ಮಾತ್ರ ಹರಡಿದ್ದ ಮಾದಕ ವಸ್ತುಗಳು ಇಂದು ಹಳ್ಳಿಗಾಡಿನ ಪ್ರದೇಶಕ್ಕೂ ಹರಡಿದೆ. ಅಪ್ರಾಪ್ತ ವಯಸ್ಸಿನ ಯುವಕರು ಧೂಮಪಾನ, ಮಧ್ಯಪಾನ, ಗಾಂಜಾ ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ಯುವಸಮೂಹ ದೇಶದ ಆಸ್ತಿಯಾಗಿದೆ. ಆ ಯುವಸಮೂಹವೇ ದುಶ್ಚಟಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಚಿಂತೆಗೀಡು ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರ ನಶಾ ಮುಕ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸರ್ಕಾರ, ಪೊಲೀಸ್ ಇಲಾಖೆ, ನಾಗರೀಕರ ಸಹಕಾರದಲ್ಲಿ ಮಾದಕ ವಸ್ತುಗಳಿಂದ ದೂರವಿರಲು ಜನರಲ್ಲಿ ಅರಿವನ್ನು ಮೂಡಿಸಲು ಎಲ್ಲೆಡೆ ಜಾಥಾ, ಅಭಿಯಾನ ನಡೆಸುತ್ತಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರೆ ಮತ್ತಷ್ಟು ಮಂದಿಗೆ ನೀವು ಅರಿವು ಮೂಡಿಸಿ ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ತುರುವೇಕೆರೆ ನಿರ್ಮಾಣ ಮಾಡಲು ಕೈಜೋಡಿಸುತ್ತೀರೆಂಬ ಆಶಾಭಾವನೆ ಇಲಾಖೆಯದ್ದಾಗಿದೆ. ನೀವೆಲ್ಲರೂ ಮಾದಕ ವಸ್ತುಗಳಿಗೆ ದಾಸರಾಗದೆ ದುಶ್ಚಟಗಳಿಂದ ದೂರ ಉಳಿದು ದೇಶದ ಸತ್ಪçಜೆಗಳಾಗಬೇಕೆಂದರು.
ತುರುವೇಕೆರೆ ಸರ್ಕಲ್ ಇನ್ಸ್ ಪೆಕ್ಟರ್ ಲೋಹಿತ್ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ವಿ.ಎನ್.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಬ್ ಇನ್ಸ್ ಪೆಕ್ಟರ್ ಮೂರ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ವೀಕ್ಷಕ ಸುಂಕದ್, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ರಾಜು, ಬಾಲಕಿಯರ ಪಪೂ ಕಾಲೇಜಿನ ಪ್ರಾಂಶುಪಾಲ ಪಾಪರಾಜು, ಸರಸ್ವತಿ ಪಪೂ ಕಾಲೇಜಿನ ಪ್ರಾಂಶುಪಾಲ ಗಣೇಶ್, ಉದಯಭಾರತಿ ಪಪೂ ಕಾಲೇಜಿನ ಪ್ರಾಂಶುಪಾಲ ಲೋಕನಾಥ್, ಉಪನ್ಯಾಸಕರಾದ ಪಾಪಣ್ಣ, ಹೆಚ್.ಬಿ.ಕೋಮಲ, ಪ್ರದೀಪ್, ಸ್ವಾಮಿ, ತ್ರಿಮೂರ್ತಿ, ಸಿಬ್ಬಂದಿಗಳಾದ ಕವಿತ, ನಂಜುAಡರಾಜು, ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




