ಸಿರುಗುಪ್ಪ : ತಾಲೂಕಿನ ಸಿರಿಗೇರಿ ಗ್ರಾಮದ ಊರು ಕೆರೆ ಅಭಿವೃದ್ದಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ದರ್ಜೆಗೇರಿಸುವಂತೆ ಪಟ್ಟುಹಿಡಿದು ಗ್ರಾಮಸ್ಥರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಸರಣಿ ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಬುಧವಾರದಂದು ಸಹಾಯಕ ಆಯುಕ್ತ ಪ್ರಮೋದ್ ಅವರು ಭೇಟಿ ನೀಡಿದರು.

ಮಲಿನವಾದ ಐತಿಹಾಸಿಕ ಕೆರೆ: ಗ್ರಾಮದ ಹೃದಯ ಭಾಗದಲ್ಲಿರುವ ಐತಿಹಾಸಿಕ ಕೆರೆ ಚರಂಡಿ ನೀರಿನಿಂದ ಮಲಿನಗೊಂಡು ರೋಗರುಜಿನಗಳ ಗೂಡಾಗಿದೆ. ಕೆರೆಯಲ್ಲಿ ವ್ಯರ್ಥ ಸಸ್ಯಗಳು ಮತ್ತು ಪಾಚಿಯಂತಹ ಸಸ್ಯಗಳು ಬೆಳೆದಿವೆ.
ಕಂಪ್ಲಿ ಮಾದರಿಯಲ್ಲಿ ಕೆರೆ ಅಭಿವೃದ್ದಿಗೆ ಒತ್ತಾಯ : ಅಶುದ್ದ ವಾತಾವರಣದಲ್ಲಿ ರೋಗರುಜಿನಗಳು ಮತ್ತು ವಿಷಜಂತುಗಳ ಭಯದಲ್ಲೇ ಕೆರೆಯ ಸುತ್ತಲಿನ ಮನೆಯವರು ಜೀವಿಸುತ್ತಿದ್ದು ಸಮಸ್ಯೆಯ ಇತ್ಯರ್ಥಗೊಳಿಸಲು ಕೆರೆಗೆ ಸೇರುವ ಚರಂಡಿ ನೀರನ್ನು ತಡೆದು ಹೂಳೆತ್ತಿ, ಸ್ವಚ್ಛಗೊಳಿಸಿ ಕಂಪ್ಲಿ ಕೆರೆಯ ಮಾದರಿಯಲ್ಲಿ ಸುತ್ತಲೂ ತಂತಿ ಬೇಲಿ ಹಾಕಿ ಅಭಿವೃದ್ದಿಪಡಿಸಬೇಕು.

ಪ್ರಾಥಮಿಕ ಚಿಕಿತ್ಸೆಗಷ್ಟೇ ಸೀಮಿತ : ಗ್ರಾಮದಲ್ಲಿ 20 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ.
ಆಸ್ಪತ್ರೆಯಿದೆಯಾದರೂ ಇ.ಸಿ.ಜಿ, ಎಕ್ಸ್ರೇ, ಸ್ಕ್ಯಾನಿಂಗ್, ಇನ್ನಿತರ ಪರೀಕ್ಷೆಗಳಿಗಾಗಿ ದೂರದ ಜಿಲ್ಲಾ ಕೇಂದ್ರಕ್ಕೆ ಇಲ್ಲವೇ ಖಾಸಗಿ ಆಸ್ಪತ್ರೆಗಳಿಗೆ ಅಲೆಯುವಂತಾಗಿದೆ. 18ಕ್ಕೂ ಅಧಿಕ ಗ್ರಾಮಗಳು ಒಳಪಡುತ್ತಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾತ್ರಿ ವೇಳೆ ವೈದ್ಯರಿಲ್ಲದೇ ದೂರದ ಜಿಲ್ಲಾಸ್ಪತ್ರೆಗಳಿಗೆ ಅಲೆಯುವಂತಾಗಿದೆ.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಒತ್ತಾಯ : ವೈದ್ಯರು, ಮತ್ತು ಪ್ರಯೋಗಾಲಯಗಳ ಸೌಲಭ್ಯ ದೊರೆಯಲು ಈಗಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸಿ ಇಲ್ಲಿನ ಜನರ ಆರೋಗ್ಯವನ್ನು ಕಾಪಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಫಲಪ್ರದವಾಗದ ಅಧಿಕಾರಿಗಳ ಮನವೊಲಿಕೆ : ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾದ ಅಧಿಕಾರಿಯಾಗಿ ಬಂದಿದ್ದು, ಸದ್ಯ ನಿಮ್ಮ ಹೋರಾಟ ಕೈಬಿಡಿ, ನಿಮ್ಮೆಲ್ಲಾ ಸಮಸ್ಯೆಗಳ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಇತ್ಯರ್ಥ ಪಡಿಸಲಾಗುವುದೆಂದು ಎ.ಸಿ.ಪ್ರಮೋದ್, ಗ್ರೇಡ್-2 ತಹಶೀಲ್ದಾರ್ ಸತ್ಯಮ್ಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್ಕುಮಾರ್ ದಂಡಪ್ಪನವರ್ ಮನವೊಲಿಸಲು ಪ್ರಯತ್ನಿಸಿದರೂ ಫಲಪ್ರದವಾಗದ ಹಿನ್ನಲೆ ಹಿಂದಿರುಗಿದರು.
ಸಮಸ್ಯೆ ಇತ್ಯರ್ಥಗೊಳ್ಳುವ ತನಕ ಧರಣಿ : ನಿಮ್ಮ ಸಭೆಗಳನ್ನು ನಡೆಸಿ ನಾವು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಗ್ರಾಮದ ಸಮಸ್ಯೆಗಳು ಇತ್ಯರ್ಥವಾಗುವ ತನಕ ನಮ್ಮ ಧರಣಿ ನಡೆಯುತ್ತದೆಂದು ಗ್ರಾಮಸ್ಥರು ತಿಳಿಸಿದರು.
ಶ್ರೀಗಳು, ಮುಖಂಡರಿಂದ ಹೋರಾಟಕ್ಕೆ ಬೆಂಬಲ :ಗ್ರಾಮಸ್ಥರ ಹೋರಾಟ ಬೆಂಬಲಿಸಿ ಗುರುಬಸವ ಮಠದ ಬಸವಭೂಷಣ ಶ್ರೀ, ಯುವ ಮುಖಂಡ ಟಿ.ಧರಪ್ಪ ನಾಯಕ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಆಗಮಿಸಿ ರೈತರು ಮತ್ತು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿ ನಿಮ್ಮ ಹೋರಾಟ ಯಶಸ್ವಿಯಾಗಲೆಂದರು.
ಇದೇ ವೇಳೆ ಗ್ರಾಮಸ್ಥರಾದ ಕುಂಬಾರ್ ಬಸವರಾಜ, ಶೇಖರ್, ಡ್ರೈವರ್ ಹುಲುಗಪ್ಪ, ಸುರೇಶ, ಶೇಖರ್, ವೀರೇಶ, ಸದ್ದಾಂ, ಅನಿಲ್ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ




