ಮೊಳಕಾಲ್ಮೂರು: ತಾಲೂಕಿನ ಗಡಿ ಗ್ರಾಮ ವಾಗಿರುವ ಚಿಕ್ಕೋಬನ ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ನರಳುತ್ತಿದೆ. ಈ ಆಸ್ಪತ್ರೆಯು ಸಾರ್ವಜನಿಕ ಸೇವೆಯಿಂದ ದೂರ ಉಳಿದಿದ್ದು ಸಂಬಂಧಿಸಿದ ಅಧಿಕಾರಿಗಳು ವೈದ್ಯರನ್ನು ನೇಮಿಸುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಆಸ್ಪತ್ರೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಮೊಳಕಾಲ್ಮೂರು ತಾಲೂಕಿನ ಗಡಿ ಗ್ರಾಮಗಳಾದ ಸೂರಮ್ಮನಹಳ್ಳಿ, ಕರ್ನಾರಹಟ್ಟಿ. ಕಂಪಳ ದೇವರಹಟ್ಟಿ .ಯರಪೋತ ಜೋಗಿಹಳ್ಳಿ .ಸಿದ್ದಯ್ಯನ ಕೋಟೆ ಅಯ್ಯನ ಹಳ್ಳಿ,. ಉಗ್ಗಿ ನಿಂಗಯ್ಯನ ಹಟ್ಟಿ. ತುಮಕೂರ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜನರಿಗೆ ವೈದ್ಯಕೀಯ ಸೇವೆ ಒದಗಿಸುವ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದು ಇಲ್ಲಿಗೆ ಖಾಯಂ ವೈದ್ಯರನ್ನು ನೇಮಕ ಮಾಡುವಲ್ಲಿ ಇಲಾಖೆಯು ನಿರ್ಲಕ್ಷ್ಯ ತೋರಿಸುತ್ತಿದೆ.
ಚಿಕ್ಕೋಬನಹಳ್ಳಿ ಗ್ರಾಮವು ವಿಜಯನಗರ ಜಿಲ್ಲೆಯ ಗಡಿಭಾಗದ ಕುಗ್ರಾಮವಾಗಿದ್ದು ಇದನ್ನು ಮನಗಂಡ ಜನಪ್ರತಿನಿಧಿಗಳು ಸರ್ಕಾರದಿಂದ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಗ್ರಾಮದಲ್ಲಿ ನಿರ್ಮಾಣ ಮಾಡಿಸಿದ್ದಾರೆ. ಆಸ್ಪತ್ರೆಗೆ ಬೇಕಾಗುವ ವೈದ್ಯರು ಮತ್ತು ಶುಶ್ರೂಷಕರನ್ನು ಒದಗಿಸಿಕೊಡುವಲ್ಲಿ ಇಲಾಖೆಯು ವಿಫಲವಾಗಿದ್ದು. ಮೂರು ತಿಂಗಳಿಗೊಬ್ಬ, ಆರು ತಿಂಗಳಿಗೊಬ್ಬರಂತೆ ವೈದ್ಯರನ್ನು ಇಲ್ಲಿಗೆ ನಿಯೋಜನೆ ಮಾಡುತ್ತಾರೆ.
ಯಾವ ವೈದ್ಯರು ಇಲ್ಲಿ ಕರ್ತವ್ಯ ನಿರ್ವಹಿಸಲು ಮನಸ್ಸು ಮಾಡುತ್ತಿಲ್ಲ, ಕೆಲವು ಸಂದರ್ಭಗಳಲ್ಲಿ ವೈದ್ಯರು ಬೇಕಾಬಿಟ್ಟಿಯಾಗಿ ರೋಗಿಗಳ ಬಳಿ ನಡೆದುಕೊಳ್ಳುತ್ತಿದ್ದು ಇದರಿಂದ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆ ಎಂದರೆ ಅದರ ಸಹವಾಸವೇ ಬೇಡ ಎನ್ನುವಂತಾಗಿದೆ. ಆಸ್ಪತ್ರೆಗೆ ಉತ್ತಮವಾದ ವಾತಾವರಣ ಮತ್ತು ಅವಶ್ಯಕತೆಗಿಂತಲೂ ಹೆಚ್ಚಿನ ಆವರಣವಿದ್ದು ಇಲ್ಲಿ ಸಾರ್ವಜನಿಕರ ಯಾವುದೇ ತೊಂದರೆ ಇಲ್ಲದೆ ವೈದ್ಯರು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಬಹುದು.
ನಿಯೋಜನೆಗೊಂಡ ವೈದ್ಯರು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತ ಸೇವೆ ನೀಡಿ ಹಲವು ಕಾರಣ ನೀಡಿ ಬೇರೆಡೆಗೆ ನಿಯೋಜನೆಗೊಳ್ಳುತ್ತಿದ್ದಾರೆ.
ಸ್ಟಾಪ್ ನರ್ಸ್. ಫಾರ್ಮಸಿಸ್ಟ್ಗಳನ್ನು ಇಲಾಖೆಯು ಇದುವರೆಗೆ ನೇಮಕ ಮಾಡಿಲ್ಲ. ರೋಗಿಗಳಿಗೆ ನಿತ್ಯ ಬೇಕಾಗುವ ಔಷಧಿ. ಇಂಜೆಕ್ಷನ್ಗಳ ಕೊರತೆ ಇದೆ. ಇವುಗಳನ್ನು ಅಧಿಕಾರಿಗಳು ಒದಗಿಸಿಕೊಡಬೇಕು. ಜೊತೆಗೆ ಶಾಸಕರು ಅಂಬುಲೆನ್ಸ್ ಹಾಗೂ ಸಿಬ್ಬಂದಿ ವಾಸ್ತವ್ಯಕ್ಕೆ ಕೊಠಡಿಗಳನ್ನು ನಿರ್ಮಿಸಲು ಅನುದಾನ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಎಂ.ಬಿ ಸಿದ್ದೇಶ್ವರ. ಯಜಮಾನ್ ದಾಸಪ್ಪ. ದಳಪತಿ ಸೂರಯ್ಯ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಓಬಣ್ಣ. ಸದಸ್ಯರಾದ ಓ. ಕರಿಬಸಪ್ಪ. ನಾಗಭೂಷಣ. ಎಚ್. ಎಮ್. ರವಿ. ಚೆನ್ನಪ್ಪ. ಕೆ. ಓ ಬಯ್ಯ. ಸಿ.ಬಿ. ಕೊಲ್ಲಪ್ಪ. ಚನ್ನಬಸಮ್ಮ ಗ್ರಾಮದ ಮಹಿಳೆಯರು, ಮಕ್ಕಳು ಹಾಜರಿದ್ದರು.
ವರದಿ : ಪಿಎಂ ಗಂಗಾಧರ




