ಸಿರುಗುಪ್ಪ: ತಾಲೂಕಿನೆಲ್ಲೆಡೆ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಜರುಗಿಸುವ ಮೂಲಕ ಕಡಿವಾಣ ಹಾಕುವಂತೆ ಭಾರತ ವೈಭವ ಪತ್ರಿಕೆ ವರದಿಗಾರ ಶ್ರೀನಿವಾಸ ನಾಯ್ಕ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಲ್ಲಾ ರಮೇಶ ಬಾಬು ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಶ್ರೀನಿವಾಸ ಅವರು ತಾಲೂಕಿನ ಅಗಸನೂರು ಗ್ರಾಮದಲ್ಲಿ ತುರ್ತು ಚಿಕಿತ್ಸೆ ವೈದಕೀಯ ಸೇವಕನೆಂದು ಹೇಳಿಕೊಂಡು ಆರ್.ಎಮ್.ಪಿ ವೈದ್ಯ ನಾಗರಾಜ ತಂದೆ ನರಸಿಂಹಲು ನನ್ನ ವಿರುದ್ದ ಸಿರುಗುಪ್ಪ ಪೋಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುತ್ತಾರೆ. ತಾಲೂಕಿನಲ್ಲಿ ಇದೇ ರೀತಿ ಹಲವಾರು ಗ್ರಾಮದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಇದರ ಹಿಂದೆ ದೊಡ್ಡ ದೊಡ್ಡ ಅಧಿಕಾರಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗುತ್ತಿದೆ. ಏಕೆಂದರೆ ಈ ಬಗ್ಗೆ ಕೆಲವು ದಿನಗಳ ಹಿಂದೆ ಸಿರುಗುಪ್ಪ ತಾಲೂಕು ವೈದ್ಯಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಮಾತನಾಡಿ ಈಗಾಗಲೇ ನಮ್ಮ ತಂಡಗಳಿ0ದ ದಾಳಿ ನಡೆಸಿದ್ದೇವೆ. ಯಾರು ನಮ್ಮ ಕಣ್ಣಿಗೆ ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿಯೂ ದಾಳಿ ಮಾಡುವ ಮೂಲಕ ಕಡಿವಾಣ ಹಾಕುವುದಾಗಿ ತಿಳಿಸಿದರು. ಪ್ರತಿ ಹಳ್ಳಿಗಳಲ್ಲೂ ಆರ್.ಎಮ್.ಪಿ ಖಾಸಗಿ ವೈದ್ಯರು ಕಾಣಸಿಗುತ್ತಾರೆ. ಆದರೆ ವೈದ್ಯಾಧಿಕಾರಿಗಳಿಗೆ ಮಾತ್ರ ಕಾಣುತ್ತಿಲ್ಲವೆಂದರೆ ಇದೊಂದು ಜಾಣಕುರುಡುತನದ ಪರಮಾವಧಿ ಎಂದೇ ಹೇಳಬಹುದಾಗಿದೆ.
ಹಣದ ಆಸೆಗಾಗಿ ಚಿಕಿತ್ಸೆ ನೀಡುವ ಇವರು ಜನರಿಗೆ ಮೋಸ ಮಾಡುತ್ತಾ, ತೀರ ಅನಾರೋಗ್ಯದ ತುರ್ತು ಸಂದರ್ಭದಲ್ಲಿ ಅಧಿಕೃತ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳ ಕಡೆ ಬೆರಳು ಮಾಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಬೀಸಾಡುವ ವೈದ್ಯಕೀಯ ತ್ಯಾಜ್ಯದಿಂದ ಪರಿಸರ ಮಾಲಿನ್ಯವಾಗುತ್ತಿದ್ದು, ಗಾಜಿನಂತಹ ಬಾಟಲಿಗಳು, ಸಿರಂಜಿಗಳು, ಸೂಜಿಯಿಂದಾಗಿ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಏನಾದರೂ ಹೆಚ್ಚು ಕಡಿಮೆ ಮಾತನಾಡಿದರೆ ಪೋಲೀಸ್ ಠಾಣೆಗಳನ್ನು ಅಲೆಸುವುದಾಗಿ ಬೆದರಿಸುವುದು. ಸುಳ್ಳು ಪ್ರಕರಣಗಳನ್ನು ದಾಖಲಿಸಲು ಮುಂದಾಗುತ್ತಾರೆ. ಇದರಿಂದಾಗಿ ಜನರ ಜೇಬು ಖಾಲಿಯಾಗುತ್ತದೆಯೇ ಹೊರತಾಗಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇನ್ನು ಮುಂದಾದರೂ ಸಂಬ0ಧಿಸಿದ ಮೇಲಾಧಿಕಾರಿಗಳು ಗಮನಹರಿಸಿ ನಕಲಿ ವೈದ್ಯರ ಹಾವಳಿ ತಡೆಯಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ: ಶ್ರೀನಿವಾಸ ನಾಯ್ಕ




