ಹುಬ್ಬಳ್ಳಿ : ಈಜಲು ಹೋಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಬೈರಿದೇವರಕೊಪ್ಪದಲ್ಲಿರುವ ರೇಣುಕಾ ನಗರದ ಸಮರ್ಥ್ ಮತ್ತು ಹರೀಶ್ ಎಂಬ ಹದಿನೇಳು ವರ್ಷದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು,ಇವರು ಅಕ್ಕ-ಪಕ್ಕದ ಮನೆಯ ನಿವಾಸಿಗಳು.
ಗೋಪನಕೊಪ್ಪ ಬಳಿಯಿರೋ ಸರ್ಕಾರಿ ಪದವಪೂರ್ವ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಓದುತ್ತಿದ್ದ ಇವರು, ಪ್ರಥಮ ಪಿಯುಸಿ ಪರೀಕ್ಷೆ ಮುಗಿದಿರುವ ಕಾರಣ ಮನೆಯಲ್ಲಿದ್ದರು. ಹುಬ್ಬಳ್ಳಿಯಲ್ಲಿ ಬಿಸಿಲು ಹೆಚ್ಚಾಗಿರೋದರಿಂದ ಮನೆ ಸಮೀಪ ಇರುವ ನಿರ್ಮಾಣ ಹಂತದ RNS ಗಾಲ್ಫ್ ಮೈದಾನದಲ್ಲಿರೋ ಹೊಂಡಕ್ಕೆ ಈಜಲು ಹೋಗಿದ್ದರು.
ಮಧ್ಯಾಹ್ನ ಮನೆಯಿಂದ ಹೋದವರು, ಸಂಜೆಯಾದರೂ ಬಂದಿರಲಿಲ್ಲ. ಈ ನಡುವೆ ಇವರು ಹೊಂಡದಲ್ಲಿ ಮುಳುಗಿರೋದನ್ನು ಗಮನಿಸಿರುವ ಅಲ್ಲಿನ ಕೆಲಸಗಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎನ್ನಲಾಗಿದೆ.
ಇನ್ನು ಈ ಇಬ್ಬರಿಗೂ ಸರಿಯಾಗಿ ಈಜಲು ಬರುತ್ತಿರಲಿಲ್ಲವಂತೆ. ಹೀಗಿದ್ದರೂ ಹುಚ್ಚು ಸಾಹಸ ಮಾಡಿ ಈಜಲು ಹೋದವರು ಬಾರದ ಲೋಕಕ್ಕೆ ತೆರಳಿದ್ದಾರೆ. ಮನೆಗೆ ಆಧಾರವಾಗಿದ್ದ ಏಕೈಕ ಗಂಡು ಮಕ್ಕಳ ಅಕಾಲಿಕ ನಿಧನ ಹೆತ್ತವರನ್ನು ಆಘಾತಕ್ಕೆ ದೂಡಿದೆ.
ಶವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವ ಸಂಬಂಧಿಕರ ಆಕ್ರಂದನ ಕಲ್ಲು ಹೃದಯವನ್ನೂ ಕರಗಿಸುವಂತೆ ಕಂಡುಬಂದಿದ್ದು, ಘಟನೆ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿಲು ಎಂದು ಸಿಕ್ಕ ಸಿಕ್ಕಲ್ಲಿ ಈಜಲು ಹೋದ್ರೆ ಸಂಕಷ್ಟ ಎದುರಾಗೋ ಸಾಧ್ಯತೆಯಿದ್ದು, ಮಕ್ಕಳು ಮತ್ತು ಯುವಕರು ಈ ಬಗ್ಗೆ ಜಾಗೃತರಾಗಿರಬೇಕು. ಜೊತೆಗೆ ಹೆತ್ತವರು ಕೂಡಾ ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು. ಮಕ್ಕಳನ್ನು ಕಳೆದುಕೊಂಡ ಮೇಲೆ ಕಣ್ಣೀರು ಹಾಕಿದರೆ ಯಾವುದೇ ಪ್ರಯೋಜನವಾಗಲಾರದು ಎಂಬ ಮಾತುಗಳು ಕೂಡ ಕೇಳಿಬಂದಿವೆ.




