ಬೆಂಗಳೂರು : ಮುಸ್ಲಿಂ ವೈಯಕ್ತಿಕ ಕಾನೂನು ಬಹುಪತ್ನಿತ್ವಕ್ಕೆ ಅವಕಾಶ ನೀಡುತ್ತದೆ ಎಂಬ ನೆಪವನ್ನಿಟ್ಟುಕೊಂಡು, ಮೊದಲ ಮದುವೆ ಅಸ್ತಿತ್ವದಲ್ಲಿರುವಾಗಲೇ 'ವಿಶೇಷ ವಿವಾಹ ಕಾಯ್ದೆ'ಯ ಅಡಿಯಲ್ಲಿ ಮಾಡಿಕೊಳ್ಳುವ ಎರಡನೇ ಮದುವೆಗೆ ಕಾನೂನಿನ ಮಾನ್ಯತೆ ದೊರೆಯುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಈ ಕಾರಣದಿಂದಾಗಿ ಅಂತಹ ದ್ವಿತೀಯ ಪತ್ನಿಗೆ ಮೃತನ ಆಸ್ತಿಯಲ್ಲಿ ಯಾವುದೇ ಕಾನೂನಾತ್ಮಕ ಪಾಲು ಸಿಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ತೀರ್ಪು ನೀಡಿದೆ.
ಹೈಕೋರ್ಟ್ನ ಧಾರವಾಡ ಪೀಠದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶವನ್ನು ಹೊರಡಿಸಿದೆ.
ವ್ಯಕ್ತಿಗಳು ತಮ್ಮ ವೈಯಕ್ತಿಕ ಕಾನೂನುಗಳನ್ನು ಬದಿಗೊತ್ತಿ ಸ್ವಇಚ್ಛೆಯಿಂದ 'ವಿಶೇಷ ವಿವಾಹ ಕಾಯ್ದೆ'ಯನ್ನು ಆಯ್ಕೆ ಮಾಡಿಕೊಂಡಾಗ, ಅವರು ಸಂಪೂರ್ಣವಾಗಿ ಅದೇ ಕಾಯ್ದೆಯ ನಿಯಮ-ನಿಬಂಧನೆಗಳಿಗೆ ಬದ್ಧರಾಗಿರಬೇಕು. ಈ ಕಾಯ್ದೆಯಡಿ ಮದುವೆಯಾಗಲು 'ಜೀವಂತ ಪತಿ ಅಥವಾ ಪತ್ನಿ ಇರಬಾರದು' ಎಂಬುದು ಮುಖ್ಯ ಷರತ್ತಾಗಿದೆ.
ಕಾಯ್ದೆಯ ಸೌಲಭ್ಯವನ್ನು ಪಡೆಯುತ್ತಾ, ಅದೇ ಸಮಯದಲ್ಲಿ ವೈಯಕ್ತಿಕ ಕಾನೂನಿನ ವಿನಾಯಿತಿ ಕೋರುವುದು ಕಾನೂನುಬಾಹಿರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


