ತುರುವೇಕೆರೆ: ಕಟ್ಟಡ ಹಾಗೂ ಸೇತುವೆ ನಿರ್ಮಾಣಕ್ಕೆ ಬಳಸುವ ಸೆಂಟ್ರಿಂಗ್ ಶೀಟ್, ಬೋರ್ವೆಲ್ ಕೇಬಲ್ ಹಾಗೂ ಬೈಕ್ ಕಳವು ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಆರೋಪಿಗಳನ್ನು ತುರುವೇಕೆರೆ ಪೊಲೀಸರು ಬಂಧಿಸಿದ್ದಾರೆ.
ಮೇ 18ರ ಮಧ್ಯರಾತ್ರಿ ತುರುವೇಕೆರೆ ಪಟ್ಟಣದ ಚೌದ್ರಿ ಕನ್ವೇಷನ್ ಹಾಲ್ ಬಳಿಯ ಶೆಡ್ನಲ್ಲಿ ಇಟ್ಟಿದ್ದ 250 ಸೆಂಟ್ರಿಂಗ್ ಶೀಟ್, 60 ಸೆಂಟ್ರಿಂಗ್ ಜಾಕ್, 100 ಸೆಂಟ್ರಿಂಗ್ ಪೋಲ್ ಹಾಗೂ 20 ಪೀಸ್ ಕಾಲಂಗಳು ಸೇರಿ ಒಟ್ಟು 1.40 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ತುರುವೇಕೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ್ ಹಾಗೂ ಪುರುಷೋತ್ತಮ.ಎಂ.ಎಲ್ ಅವರ ನೇತೃತ್ವದಲ್ಲಿ ಮತ್ತು ಕುಣಿಗಲ್ ಉಪವಿಭಾಗದ ಡಿವೈಎಸ್ಪಿ ಓಂ ಪ್ರಕಾಶ್ ಅವರ ಮುಂದಾಳತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ತುರುವೇಕೆರೆ ವೃತ್ತದ ಪ್ರಭಾರ ಸಿಪಿಐ ಮಾಧವನಾಯ್ಕ, ಸಿಪಿಐ ಲೋಹಿತ್ ಬಿ.ಎನ್., ಪಿಎಸ್ಐ ಮೂರ್ತಿ.ಟಿ ಸೇರಿದಂತೆ ಪೊಲೀಸ್ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ತುರುವೇಕೆರೆ ಠಾಣೆಯ ನಾಲ್ಕು ಪ್ರಕರಣ, ಹುಳಿಯಾರು, ತಿಪಟೂರು ಗ್ರಾಮಾಂತರ ಹಾಗೂ ಕ್ಯಾತಸಂದ್ರ ಠಾಣೆಗಳ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು ಏಳು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಿಂದ 289 ಸೆಂಟ್ರಿಂಗ್ ಶೀಟ್ಗಳು, 20 ಕಬ್ಬಿಣದ ಹ್ಯಾಂಗಲ್ಗಳು, 40 ಕೆ.ಜಿ. ಕೇಬಲ್ ವೈರ್, ಒಂದು ಬೈಕ್ ಹಾಗೂ ಒಂದು ಬೊಲೆರೋ ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು 5.25 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ತುರುವೇಕೆರೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಬಡಗರಹಳ್ಳಿಯ ಪುನೀತ್ ಗೌಡ ಬಿ.ಆರ್. (24) ಹಾಗೂ ಕುಮಾರ್ (30) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ. ಹಾಗೂ ಕೇಂದ್ರ ವಲಯ ಡಿಐಜಿಪಿ ಎಸ್.ಗಿರೀಶ್ ಶ್ಲಾಘಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್


