ಭಾದ್ರಪದ ಶುಕ್ಲ ಚತುರ್ಥಿಯಂದು ಗಣಪತಿಯನ್ನು ಪ್ರತಿಷ್ಠಾಪಿಸಿ ಮಹಾಗಣಪತಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಲಾಯಿತು. ಬರಹಗಾರ ತುರುವೇಕೆರೆ ಪ್ರಸಾದ್ ಅವರಿಂದ ಉಪನ್ಯಾಸ, ಶಿವಶಕ್ತಿ ನಾಟ್ಯಕಲಾ ತಂಡದವರಿಂದ ಭರತನಾಟ್ಯ, ಶ್ರೀನಿವಾಸ ಭಜನಾ ಮಂಡಳಿಯಿಂದ ಭಜನೆ ಹಾಗೂ ಸಾರ್ವಜನಿಕರಿಂದ ಸಾರ್ವಜನಿಕರಿಗೆ ಅನ್ನದಾನ, ಭೂಕೈಲಾಸ ಹರಿಕಥೆ ಸೇರಿದಂತೆ ಹಲವು ವಿಶೇಷಚ ಕಾರ್ಯಕ್ರಮವನ್ನು ಗಣೇಶೋತ್ಸವದಲ್ಲಿ ನಡೆಸಲಾಯಿತು. ಒಂದು ವಾರ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಪ್ರತಿನಿತ್ಯ ಸಂಜೆ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.

ಅಂತಿಮ ದಿನ ಮಂಗಳವಾದ್ಯ, ವೀರಗಾಸೆ, ನಾಸಿಕ್ ಡೋಲ್, ಚಿಟ್ಟಿಮೇಳ, ಕೀಲುಕುದುರೆ ಉತ್ಸವ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಶ್ರೀ ಸತ್ಯಗಣಪತಿ ಮತ್ತು ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರಸ್ವಾಮಿಯವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಿ, ಶ್ರೀ ಸತ್ಯಗಣಪತಿ ಸ್ವಾಮಿಯನ್ನು ಭಕ್ತಿಶ್ರದ್ಧೆಗಳಿಂದ ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್, ಧೇನುಪುರಿ ಭಜನಾ ಮಂಡಳಿಯ ಸೀತಾಲಕ್ಷ್ಮೀ, ಉಮಾಮಂಜುನಾಥ್, ಸುಶೀಲಾಶಂಕರಮೂರ್ತಿ, ಪಪಂ ಸದಸ್ಯ ಮಧು, ಮುತ್ತುರಾಯನಗರ ನಾಗರೀಕ ವೇದಿಕೆಯ ವಕೀಲ ಕೆ.ನಾಗೇಶ್, ಜಯಂತ್, ಪ್ರಜ್ವಲ್ ಸೇರಿದಂತೆ ಮುತ್ತುರಾಯನಗರದ ನಾಗರೀಕರು, ಧೇನುಪುರಿ ಭಜನಾ ಮಂಡಳಿಯ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

