ಕಲಘಟಗಿ:ವಿದ್ಯಾರ್ಥಿಗಳಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕಲಘಟಗಿಯ ಗುಡ್ ನ್ಯೂಸ್ ವೆಲ್ಫೇರ್ ಸೊಸೈಟಿಯ ಪ್ರಥಮ ದರ್ಜೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಮಾನಸಿಕ ಆರೋಗ್ಯ, ಬಾಹ್ಯ ಆರೋಗ್ಯ ಹಾಗೂ ದಂತ ಆರೋಗ್ಯ ಕುರಿತು ವಿಶೇಷ ಆರೋಗ್ಯ ಜಾಗೃತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಐಕ್ಯೂಎಸಿ (IQAC) ಉಪಕ್ರಮದಡಿ, ಯೂತ್ ರೆಡ್ ಕ್ರಾಸ್, ಎನ್ಎಸ್ಎಸ್ ಹಾಗೂ ಸಮಾಜಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಗಿರೀಶಬಾಬು, ಡಾ. ಅಮಿತ್ ಬ್ಯಾತನಾಳ ಮತ್ತು ಡಾ.ಪ್ರಸೆಲ್ಲಾ ಥಾಮಸ್ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಡಾ. ಗಿರೀಶಬಾಬು ಅವರು ಮಾನಸಿಕ ಆರೋಗ್ಯದ ಮಹತ್ವ, ವಿದ್ಯಾರ್ಥಿ ಜೀವನದಲ್ಲಿ ಉಂಟಾಗುವ ಒತ್ತಡ, ಆತಂಕ ಹಾಗೂ ಅದನ್ನು ಸಮರ್ಥವಾಗಿ ನಿಭಾಯಿಸುವ ವಿಧಾನಗಳ ಕುರಿತು ವಿವರಿಸಿದರು. ಡಾ. ಅಮಿತ್ ಬ್ಯಾತನಾಳ ಅವರು ದೈಹಿಕ ಹಾಗೂ ಬಾಹ್ಯ ಆರೋಗ್ಯ, ವೈಯಕ್ತಿಕ ಸ್ವಚ್ಛತೆ ಮತ್ತು ದಂತ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಆರೋಗ್ಯಕರ ಜೀವನಶೈಲಿ, ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ ಹಾಗೂ ದೈನಂದಿನ ಸ್ವಚ್ಛತಾ ಅಭ್ಯಾಸಗಳನ್ನು ರೂಢಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಡಾ. ಪ್ರಸೆಲ್ಲಾ ಥಾಮಸ್ ಅವರು ಸ್ತ್ರೀ ರೋಗ ಹಾಗೂ ಆರೋಗ್ಯದ ಬಗ್ಗೆ ಮಾತನಾಡಿ ಮಹಿಳೆಯರು ಮುಟ್ಟಿನ ನೈರ್ಮಲ್ಯ ಕುರಿತು ಸಲಹೆಗಳನ್ನು ನೀಡುತ್ತಾ ಆರೋಗ್ಯ ರಕ್ಷಣೆಯ ಹಂತಗಳನ್ನು ತಿಳಿಸಿ ಮತ್ತು ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ಗರ್ಭಕಂಠ ಕ್ಯಾನ್ಸರ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರೆವರೆಂಡ್ ಬ್ರದರ್ ವರ್ಗಿಸ್ ಕೆ.ಜೆ. ಅವರು ವಹಿಸಿದ್ದರು. ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಅವರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಾಳಜಿಯೂ ಅತ್ಯಂತ ಮುಖ್ಯವಾಗಿದೆ. ಆರೋಗ್ಯವಂತ ಹಾಗೂ ಜಾಗೃತ ಯುವಜನತೆಯೇ ಭವಿಷ್ಯದ ಸದೃಢ ಸಮಾಜದ ನಿರ್ಮಾತೃಗಳು ಎಂದು ಹೇಳಿದರು.
ಪ್ರಾಚಾರ್ಯರಾದ ಡಾ. ಮಹೇಶ ಧ. ಹೊರಕೇರಿ ಅವರು ಅತಿಥಿಗಳ ಪರಿಚಯ ಮಾಡಿಕೊಟ್ಟರು. 
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ನವಿನಾ ರೆಡ್ಡೆರ, ಡಾ. ಅನ್ನಪೂರ್ಣ ಸಾಲಿ, ಶ್ರೀಮತಿ ಜಯಾ ಜಾಧವ ಮತ್ತು ಪ್ರಥಮ ದರ್ಜೆ ಹಾಗೂ ಪದವಿಪೂರ್ವ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


