ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ವರ್ಷಗಳಿಂದ ಅಂಬಾರಿ ಹೊತ್ತು ಜನಮನ ಗೆದ್ದಿದ್ದ 'ಕ್ಯಾಪ್ಟನ್ ಕಿಂಗ್' ಅಭಿಮನ್ಯುವನ್ನು ಈ ಬಾರಿ ನಿಶಾನೆ ಆನೆಯಾಗಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಆಯ್ಕೆ ಮಾಡಲಾಗಿದೆ.
60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವನ್ನು ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿತ್ತು.
ದಸರಾ ಗಜಪಡೆಯಿಂದಲೂ ಅಭಿಮನ್ಯುವನ್ನು ಕೈಬಿಡಲಾಗಿತ್ತು. ಆದರೆ ಕೋಟ್ಯಂತರ ಅಭಿಮಾನಿಗಳ ಒತ್ತಾಸೆ ಹಾಗೂ ಭಾವನೆಗಳಿಗೆ ಮನ್ನಣೆ ನೀಡಿ, ಹಿರಿಯ ಹಾಗೂ ಅನುಭವಿ ಅಭಿಮನ್ಯುವಿಗೆ ದಸರಾ ಮೆರವಣಿಗೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ.
ಅಭಿಮನ್ಯು ಹಲವು ವರ್ಷಗಳ ಕಾಲ ಮೈಸೂರು ದಸರೆಯ ಅಂಬಾರಿ ಹೊತ್ತು ನಾಡಿನ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆ. ಆತನ ಶಾಂತ ಸ್ವಭಾವ, ಶಿಸ್ತು, ಧೈರ್ಯ ಹಾಗೂ ನಾಯಕತ್ವದ ಗುಣಗಳಿಂದಾಗಿ 'ಕ್ಯಾಪ್ಟನ್' ಎಂದೇ ಅಭಿಮಾನಿಗಳಿಂದ ಕರೆಯಲ್ಪಡುತ್ತಾನೆ.
ಹಿರಿಯ ಆನೆಯಾಗಿ ದಸರಾ ಗಜಪಡೆಯಲ್ಲಿರುವ ಇತರ ಆನೆಗಳಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವೂ ಅಭಿಮನ್ಯುವಿಗಿದೆ. ಹೀಗಾಗಿ ನಿಶಾನೆ ಆನೆಯಾಗಿ ಅಭಿಮನ್ಯುವಿನ ಆಯ್ಕೆ ದಸರಾ ಅಭಿಮಾನಿಗಳಿಗೆ ಸಂತಸ ತಂದಿದೆ.
ಈ ಮೂಲಕ ದಸರಾ ಜಂಬೂಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯುವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಸತತ ಆರು ಬಾರಿ ದಸರಾ ಕ್ಯಾಪ್ಟನ್ ಆಗಿ ಚಾಮುಂಡೇಶ್ವರಿ ದೇವಿಯ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದ ಅಭಿಮನ್ಯು, ತನ್ನ ಶಿಸ್ತು, ಧೈರ್ಯ, ಗಾಂಭೀರ್ಯ ಮತ್ತು ಕರ್ತವ್ಯನಿಷ್ಠೆಯಿಂದ ನಾಡಿನ ಜನರ ಮನ ಗೆದ್ದಿದ್ದಾನೆ.
60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವನ್ನು ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾಗಿತ್ತು.
2026ರ ದಸರಾ ಗಜಪಡೆಯ ಆರಂಭಿಕ ಪಟ್ಟಿಯಲ್ಲಿ ಅಭಿಮನ್ಯುವಿನ ಹೆಸರು ಇಲ್ಲದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.
ಇದೀಗ ಆತನಿಗೆ ನಿಶಾನೆ ಆನೆಯ ಸ್ಥಾನ ನೀಡುವ ಮೂಲಕ ಗೌರವಪೂರ್ವಕ ವಿದಾಯ ನೀಡಲು ಮುಂದಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.


