ಭಾಲ್ಕಿ,: ಗಡಿಜಿಲ್ಲೆ ಬೀದರ್ನಲ್ಲಿ ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆ ಎದುರಾಗಿದ್ದು ಜಿಲ್ಲೆಯ ರೈತರು ಆತಂಕಕ್ಕಿಡಾಗಿದ್ದಾರೆ. ಕೂಡಲೇ ರಾಜ್ಯ ಬೀದರ್ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ತಾಲೂಕು ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಈ ಕುರಿತು ನಗರದ ತಹಸೀಲ್ ಕಚೇರಿಯಲ್ಲಿ ಕನ್ನಡಪರ ಸಂಘಟನೆ ಹಿರಿಯ ಹೋರಾಟಗಾರ ಸಂಗಮೇಶ ಗುಮ್ಮೆ ನೇತೃತ್ವದಲ್ಲಿ ಮಂಗಳವಾರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮುಂಗಾರು ಹಂಗಾಮಿನಲ್ಲಿ ಬಹುತೇಕ ರೈತರ ಜಮೀನಿನಲ್ಲಿ ಬಿತ್ತನೆಯಾದ ಸೋಯಾ ಅವರೆ, ಹೆಸರು, ಕಡಲೆ, ತೊಗರಿ ಸೇರಿ ವಿವಿಧ ಬೆಳೆಗಳು ಮಳೆಯ ಕೊರತೆಯಿಂದ ಒಣಗುತ್ತಿವೆ. ಇದರಿಂದ ಸಾಲಸೋಲ ಮಾಡಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರ ಜಿಲ್ಲೆಯ ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಬೀದರ್ ಜಿಲ್ಲೆ ಬರಪೀಡಿತ ಪ್ರದೇಶವನ್ನಾಗಿ ಘೋಷಿಸಿ ಸೂಕ್ತ ಪರಿಹಾರ ವಿತರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಪ್ರಮುಖರಾದ ಮಾಳಾಸ್ಕಾಂತ ವಾಘೆ, ಸಂಜೀವಕುಮಾರ ನಾವದಗಿ, ಸಂತೋಷ ಬಿಜಿ ಪಾಟೀಲ್, ಭದ್ರೇಶ ಸ್ವಾಮಿ, ಶಿವಕುಮಾರ ಸ್ವಾಮಿ, ಅಶೋಕ ಅಂಬಿಗಾರ, ಓಂಕಾರ ಮಚಕೂರಿ, ಆದಿಲ್ ಸಯ್ಯದ್, ಸುರೇಶ ಕಾಂಬಳೆ, ಸಂಗಮೇಶ ಮುರಗೆ, ಸಂಜು ಲಂಜವಾಡ, ಶಿವರಾಜ ಭೂರೆ, ಚಂದ್ರಕಾAತ ಮಾಲೂರೆ, ರಾಜಕುಮಾರ ಜೋಶಿ ಸೇರಿದಂತೆ ಹಲವರು ಇದ್ದರು.
ವರದಿ : ಸಂತೋಷ ಬಿಜಿ ಪಾಟೀಲ


